ಮೂಡುಬಿದಿರೆ: ಹೋಮ್ ಐಸೊಲೇಷನಲ್ಲಿರುವವರು ಹಾಗೂ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಬಗ್ಗೆ ಸ್ಪಷ್ಟ ಮಾಹಿತಿ ಇಟ್ಟುಕೊಂಡು, ಪೂರ್ತಿ ಗುಣಮುಖವಾಗುವಲ್ಲಿಯರೆಗೆ ನಿಗಾವಿಡಬೇಕೆಂದು ಶಾಸಕ ಉಮಾನಾಥ ಕೋಟ್ಯಾನ್ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡ ಭವನದಲ್ಲಿ ಶುಕ್ರವಾರ ನಡೆದ ಕೋವಿಡ್19 ಎರಡನೇ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮವಾರು ಕೋವಿಡ್ ಸೋಂಕಿತರ ವಿವರಗಳನ್ನು ಗ್ರಾಮ ಲೆಕ್ಕಿಗರ ಮೂಲಕ ಪಡಕೊಂಡರು. ಸಭೆಗೆ ಬರುವಾಗ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಪಡೆದ ಅಂಕಿ ಅಂಶವನ್ನು ನೀಡುವುದರ ಬದಲು ನೀವು ಸಂಗ್ರಹಿಸಿದ ಅಂಕಿ ಅಂಶವನ್ನು ನೀಡುವಂತೆ ಶಾಸಕರು ಗ್ರಾಮ ಲೆಕ್ಕಿಗರಿಗೆ ತಿಳಿಸಿದರು.
ತಾಲೂಕು ಪಂಚಾಯಿತಿ ಮುಖ್ಯ ಕರ್ಯನಿರ್ವಾಹಣಾಧಿಕಾರಿ ದಯಾವತಿ ಮಾತನಾಡಿ ಮೂಡುಬಿದಿರೆ ತಾಲೂಕಿನಲ್ಲಿ 447 ಮಂದಿ ಹೊಮ್ ಐಸೊಲೇಷನ್ನಲ್ಲಿದ್ದರೆ 258 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಮಾಹಿತಿ ನೀಡಿದರು.
18ರಿಂದ 45 ವರ್ಷದೊಳಗಿನವರಿಗೆ ಲಸಿಕೆ ಪಡಕೊಳ್ಳುವ ಬಗ್ಗೆ ಗ್ರಾಮ ಪಂಚಾಯಿತಿಗಳಲ್ಲಿ ಸರಿಯಾದ ಮಾಹಿತಿ ಇಲ್ಲ. ಒಂದು ಡೋಸ್ನಿಂದ ಎರಡನೇ ಡೋಸ್ ಪಡಕೊಳ್ಳುವ ಮಧ್ಯೆ ಇರಬೇಕಾದ ಅವಧಿಯ ಬಗ್ಗೆಯು ಗೊಂದಲ ಇದೆ ಎಂದು ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸಿದ ಶಾಸಕರು ಇದು ಆರೋಗ್ಯ ಇಲಾಖೆಯ ನಿರ್ದೇಶನದಂತೆ ನಡೆಯುತ್ತದೆ ಗೊಂದಲ ಬೇಡ ಎಂದರು.
ಗ್ರಾಮ ಮಟ್ಟದಲ್ಲಿ ನಡೆಯುವ ಟಾಸ್ಕ್ ಫೋರ್ಸ್ ಸಭೆಗೆ ಪೊಲೀಸರು ಹಾಜರಾಗುತ್ತಿಲ್ಲ ಎಂಬ ದೂರಿಗೆ ನಮಗೆ ಮಾಹಿತಿ ಇದ್ದರೆ ಸ್ಥಳೀಯ ಬೀಟ್ ಪೊಲೀಸರನ್ನು ಸಭೆಗೆ ಕಳಿಸುತ್ತೇವೆ ಎಂದು ಸಬ್ ಇನ್ಸ್ ಪೆಕ್ಟರ್ ಸುದೀಪ್ ತಿಳಿಸಿದರು.ತಹಸೀಲ್ದಾರ್ ಪುಟ್ಟರಾಜು, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಶಿಕಲಾ, ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಮುಖ್ಯಾಧಿಕಾರಿ ಇಂದು ಉಪಸ್ಥಿತರಿದ್ದರು.
