ತೆಂಕಮಿಜಾರು ಗ್ರಾ.ಪಂನಲ್ಲಿ ಜಾಗದ ತಿದ್ದುಪಡಿ ನಿಧಾನಗತಿ ತಾ.ಪಂ. ಸೂಚನೆಯನ್ನು ಪರಿಗಣಿಸದ ಪಿಡಿಒ
ಮೂಡುಬಿದಿರೆ: ಜಾಗದ ಕಡತದಲ್ಲಿರುವ ಹೆಸರು ತಿದ್ದುಪಡಿಗೆ ಅರ್ಜಿದಾರರೊಬ್ಬರು ಎರಡು ವರ್ಷಗಳ ಹಿಂದೆ ತೆಂಕಮಿಜಾರು ಗ್ರಾಮ ಪಂಚಾಯಿತಿ ಅರ್ಜಿಸಲ್ಲಿಸಿದ್ದರೂ ಅಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇನ್ನೂ ಸರಿಪಡಿಸದೆ ಅರ್ಜಿದಾರರನ್ನು ಸತಾಯಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಿಜಾರಿನ ಬ್ರಿಜೇಶ್ ಕುಮಾರ್ ಶೆಟ್ಟಿ ಎಂ. ಎಂಬವರು ತನ್ನ ಸ್ಥಿರಾಸ್ತಿಯ 11 ಬಿ ಗೆ ಸಂಬಂಧಿಸಿ 2019ರಲ್ಲಿ ತೆಂಕಮಿಜಾರು ಪಂಚಾಯಿತಿಯಲ್ಲಿ ಪಡಕೊಂಡ ದಾಖಲೆಯಲ್ಲಿ ಹೆಸರು ಬ್ರಿಜೇಶ್ ಕುಮಾರ್ ಶೆಟ್ಟಿ ಎಂದಷ್ಟೆ ನಮೂದಾಗಿತ್ತು.
ಪಂಚಾಯಿತಿ ಸಿಬಂದಿಗಳ ತಪ್ಪಿನಿಂದ ದಾಖಲೆಯಲ್ಲಿರುವ ಅರ್ಜಿದಾರರ ಹೆಸರಿನ ಕೊನೆಯಲ್ಲಿ `ಎಂ’ಶಬ್ದ ಬಿಟ್ಟು ಹೋಗಿದ್ದು ಅದನ್ನು ಸರಿಪಡಿಸಿಕೊಡುವಂತೆ 2019ರಲ್ಲೆ ತಿದ್ದುಪಡಿ ಕೋರಿ ಅರ್ಜಿ ಸಲ್ಲಿಸಿದ್ದರು. ಜತೆಗೆ 11 ಬಿ ಯಲ್ಲಿ ವಿಸ್ತೀರ್ಣ ತಿದ್ದುಪಡಿಗು ಮನವಿ ಮಾಡಿದ್ದರು. ಆದರೆ ಈ ಬಗ್ಗೆ ಹಲವು ಬಾರಿ ಪಂಚಾಯಿತಿಗೆ ಹೋಗಿ ವಿಚಾರಿಸಿದಾಗಲು ಅಲ್ಲಿನ ಪಂಚಾಯಿತಿ ಅಭಿವೃದ್ಧಿ ಭಾಗ್ಯಲಕ್ಷ್ಮಿ ಸ್ಪಂದಿಸಲಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ. ಪಂಚಾಯಿತಿಯ ತಪ್ಪಿನಿಂದ ತನಗಾಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಕೋರಿ ಅರ್ಜಿದಾರರು 2020ರಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದರು.ಈ ಬಗ್ಗೆ ಮುಂದಿನ ಕ್ರಮಕ್ಕಾಗಿ ಮಂಗಳೂರು ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದ್ದರು.
ದೂರುದಾರರ ಅರ್ಜಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ಅರ್ಜಿದಾರರಿಗೆ ಸಮಂಜಸ ಹಿಂಬರವನ್ನು ನೀಡುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜನವರಿ 2021 ರಂದು ತೆಂಕಮಿಜಾರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದ್ದರು. ಆದರೆ ತೆಂಕಮಿಜಾರು ಅಭಿವೃದ್ಧಿ ಅಧಿಕಾರಿ ಮೇಲಾಧಿಕಾರಿಗಳ ಸೂಚನೆಗೂ ಕ್ಯಾರೆ ಎನ್ನಲಿಲ್ಲ. ಇದರಿಂದಾಗಿ ಎರಡು ವರ್ಷವಾದರೂ ತನ್ನ ಖಾತೆಯಲ್ಲಿ ಆಗಿರುವ ಹೆಸರಿನ ಲೋಪವನ್ನು ಸರಿಪಡಿಸಲು ಅರ್ಜಿದಾರರಿಗೆ ಸಾಧ್ಯವಾಗದೆ ಕಚೇರಿಯಿಂದ ಕಚೇರಿಗೆ ಅಲೆದಾಡುವಂತಾಗಿದೆ ಎನ್ನಲಾಗಿದೆ.