ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ-ಕಾಸರಗೋಡು ಜಿಲ್ಲಾ ಘಟಕ ಉದ್ಘಾಟನೆ ನ್ಯಾಯಯುತ ವರದಿಗಾರಿಕೆಯಲ್ಲಿ ರಾಜಿ ಬೇಡ : ಶಿವಾನಂದ ತಗಡೂರು
ಕಾಸರಗೋಡು: ನ್ಯಾಯಯುತ ವರದಿಗಾರಿಕೆಯಲ್ಲಿ ಪತ್ರಕರ್ತರು ಯಾವೊತ್ತೂ ರಾಜಿ ಮಾಡಬಾರದು. ಆದರೆ ಯಾರನ್ನೂ ವಿರೋಧಿಗಳಳನ್ನಾಗಿ ಕಟ್ಟಿಕೊಳ್ಳಬಾರದು. ದಕ್ಷ ಮತ್ತು ನಿಷ್ಠೆಯ ಸೇವಾಕಾರ್ಯದಿಂದ ಪತ್ರಕರ್ತರು ಮೇರು ಎತ್ತರಕ್ಕೆ ಬೆಳೆಯುವ ಪ್ರಯತ್ನ ಮಾಡಬೇಕು. ಎಂದೂ ಒಬ್ಬಂಟಿಗನಾಗಿ ಹೋರಾಟ ಮಾಡುವ ಬದಲು ಸಂಘಟಿಕರಾಗಿ ಹೋರಾಡಿದ್ದಲ್ಲಿ ಮಾತ್ರ ಪತ್ರಕರ್ತರೂ ತಮ್ಮ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯ. ಅದಕ್ಕಾಗಿ ಒಟ್ಟಾಗಿ ಸಾಂಘಿಕರಾಗಿ ನಿಂತು ಅದನ್ನು ಹೋರಾಟ ಮಾಡಬೇಕು. ಅಂತಹ ಏಳಿಗೆಗೆ ಇಂತಹ ಸಂಸ್ಥೆಗಳ ಉದಯ ಫಲಪ್ರದ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಕರ್ನಾಟಕ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.
ಅವರು ಭಾನುವಾರ ಕಾಸರಗೋಡು ನುಳ್ಳಿಪ್ಪಾಡಿ ಇಲ್ಲಿನ ಹೊಟೇಲ್ ಹೈವೇ ಕ್ಯಾಸ್ಟಲ್ ಸಭಾಗೃಹದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಇದರ ಕಾಸರಗೋಡು ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಕೇರಳ ಕನ್ನಡ ಪತ್ರಕರ್ತರ ಸಮಾವೇಶದ ಅಧ್ಯಕ್ಷತೆ ವಹಿಸಿ ತಗಡೂರು ಮಾತನಾಡಿದರು.
ಏಷ್ಯಾ ಪತ್ರಕರ್ತರ ಒಕ್ಕೂಟದ ಸಂಚಾಲಕ ಮದನ ಗೌಡ ಸಮಾವೇಶ ಉದ್ಘಾಟಿಸಿ ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಕುಂಬಳೆ ಇದರ ಪಿಆರ್ಒ ಪ್ರೀತಂ ಡಿಸೋಜಾ ಉಪಸ್ಥಿತಿಯಲ್ಲಿ ಹಿರಿಯ ಪತ್ರಕರ್ತರಾದ ವಿ.ಜಿ ಕಾಸರಗೋಡು ಇವರಿಗೆ ಸಾಂಕೇತಿಕವಾಗಿ ಆರೋಗ್ಯ ಕಾರ್ಡ್ ವಿತರಿಸಿದರು.
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ರೋನ್ಸ್ ಬಂಟ್ವಾಳ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಗೌ| ಪ್ರ| ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಗೋಲ್ಡನ್ ಅಬ್ದುಲ್ರಹಮಾನ್, ಕೇಂದ್ರ ಸಮಿತಿ ಪ್ರತಿನಿಧಿ ಅಚ್ಯುತ ಚೇವರ್ (ಮಾಜಿ ಅಧ್ಯಕ್ಷ ಕಾಸರಗೋಡು ಕನ್ನಡ ಪತ್ರಕರ್ತರ ಸಂಘ) ಅತಿಥಿ ಅಭ್ಯಾಗತರುಗಳಾಗಿ ಉಪಸ್ಥಿತರಿದ್ದರು.
ಪತ್ರಕರ್ತರು ವೃತ್ತಿಪರ ಮೌಲ್ಯಗಳನ್ನು ಕಾಪಾಡಿಕೊಂಡು ವಿಶ್ವಾಸರ್ಹತೆಯೊಂದಿಗೆ ಕಾರ್ಯ ನಿರ್ವಹಿಸುವುದು ಸವಾಲಿನ ಕೆಲಸವಾಗಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕೋದ್ಯಮ ಪರಿಣಾಮಕಾರಿ ಆಗಿದ್ದು ಗಡಿನಾಡಿ ಭಾಷೆಗಳ ಜೊತೆ ಸಪ್ತಭಾಷೆಗಳೊಂದಿಗೆ ಸಾಮರಸ್ಯದಿಂದ ಬಾಳುವುದಕ್ಕೆ ಪತ್ರಕರ್ತರು ಪ್ರಯತ್ನಿಸಬೇಕು. ಸರ್ವ ಧರ್ಮದವರ ಜೊತೆ ಒಡನಾಟವಿರುವ ಇಲ್ಲಿನ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದ ಮದನ ಗೌಡ ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಮಲಾರ್ ಜಯರಾಮ ರೈ, ಕೆ.ಭಾಸ್ಕರ್, ಟಿ.ಶಂಕರನಾರಾಯಣ ಭಟ್, ಕಿದೂರು ಶಂಕರನಾರಾಯಣ ಭಟ್, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ದೇವದಾಸ ಪಾರೆಕಟ್ಟೆ ಇವರನ್ನು ಸನ್ಮಾನಿಸಿ ಅಭಿನಂದಿಸಿದರು ಹಾಗೂ ಜಾನಪದ ಕಲಾವಿದೆ ಪುಷ್ಪಾವತಿ ನೆಟ್ಟಣಿಗೆ ಗುತ್ತು, ಯೋಗಪಟು ಕು| ಅಭಿಜ್ಞಾ ಕಾಸರಗೋಡು ಇವರನ್ನು ಗೌರವಿಸಿ ಶುಭಾರೈಸಿದರು.
ಕೆಯುಡಬ್ಲ್ಯೂಜೆ ಕಾಸರಗೋಡು ಜಿಲ್ಲಾ ಘಟಕಧ್ಯಕ್ಷ ಅಬ್ದುಲ್ರಹಮಾನ್ ಸುಬ್ಬಯ್ಯಕಟ್ಟೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ಗಂಗಾಧರ್ ಯಾದವ್ ಪ್ರಸ್ತಾವನೆಗೈದರು. ಹರಿದಾಸ ಜಯಾನಂದ್ ಪ್ರಾರ್ಥನೆ ಹಾಡಿದರು. ಉಪಾಧ್ಯಕ್ಷ ಪುರುಷೋತ್ತಮ್ ಭಟ್, ಕೋಶಾಕಾರಿ ಪುರುಷೋತ್ತಮ ಪೆರ್ಲ, ಜೊತೆ ಕಾರ್ಯದರ್ಶಿ ಸ್ಟೀಫನ್ ಕ್ರಾಸ್ತ ಅತಿಥಿಗಳಿಗೆ ಗೌರವಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು. ಸಾಯಿಭದ್ರ ರೈ ವಂದಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರದೀಪ್ಕುಮಾರ್ ಬೇಕಲ್, ಅಬ್ದುಲ್ ರಹಮಾನ್ ಉದ್ಯಾವರ, ರತನ್ ಹೊಸಂಗಡಿ, ಜಗನ್ನಾಥ ಶೆಟ್ಟಿ ಹಾಗೂ ಆರಿಫ್ ಮಚ್ಚಂಪಾಡಿ ಸೇರಿದಂತೆ ಅನೇಕ ಪತ್ರಕರ್ತರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಹರಿದಾಸ ಜಯಾನಂದಕುಮಾರ್ ಹೊಸದುರ್ಗ ಸುಗಮ ಸಂಗೀತ ಪ್ರಸ್ತುತ ಪಡಿಸಿದರು.





