ಬಂಟ್ವಾಳ: ತಾಲೂಕಿನ ನಾವೂರು ಗ್ರಾಮದ ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಬಲಿಬಿಂಬ ಸಮರ್ಪಣೆ ಕ್ಷೇತ್ರದ ತಂತ್ರಿಗಳಾದ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯ ಅವರ ನೇತೃತ್ವದಲ್ಲಿ ಫೆ. ೩ ರಂದು ನಡೆಯಲಿದೆ.
ಫೆ.೧ ರಂದು ದೇವರ ಪ್ರಾರ್ಥನೆಯೊಂದಿಗೆ ಆರಂಭಗೊಂಡು ಶ್ರೀ ನಾವೂರೆಶ್ವರ ದೇವರ ಬಲಿಬಿಂಬ ಪರಿಗ್ರಹ, ಪ್ರಸಾದ ಶುದ್ದಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಬಿಂಬ ಜಲಾಧಿವಾಸ, ಪ್ರಾಕಾರಬಲಿ, ಪ್ರಸಾದವಿತರಣೆ ನಡೆಯಲಿದೆ. ಅಂದು ಬೆಳಿಗ್ಗೆ ೯ಕ್ಕೆ ನಾವೂರೇಶ್ವರ ದೇವರ ಬಿಂಬ ಹಾಗೂ ಪುಷ್ಪಕನ್ನಡಿಯನ್ನು ಮಣಿಹಳ್ಳದಿಂದ ಹಸಿರು ಕಾಣಿಕೆ ಮೆರವಣಿಗೆಯೊಂದಿಗೆ ಶ್ರೀ ದೇವಳಕ್ಕೆ ತರಲಾಗುವುದು.
ಫೆ. ೨ ಮಂಗಳವಾರ ಗಣಪತಿ ಹೋಮ, ಶ್ರೀ ದೇವರ ಕಲಶಾಧಿವಾಸ, ದುರ್ಗಾನಮಸ್ಕಾರ ಪೂಜೆ ನಡೆಯಲಿದೆ. ಫೆ. ೩ ರಂದು ಶ್ರೀ ನಾವೂರೇಶ್ವರ ದೇವರ ಬಲಿಬಿಂಬ ಪ್ರತಿಷ್ಠೆ, ಪಂಚಾಮೃತ ಸಹಿತ ೪೯ ಕಲಶಾಭಿಷೇಕ, ಶ್ರೀ ಸುಬ್ರಾಯ ವಿಷ್ಣಮೂರ್ತಿ ದೇವರಿಗೆ ಪಂಚಾಮೃತ ಸಹಿತ ೪೯ ಕಲಶಾಭಿಷೇಕ, ರುದ್ರಯಾಗ, ವಿಷ್ಣುಯಾಗ, ಮಹಾಪೂಜೆ ನಡೆಯಲಿದೆ. ಸಂಜೆ ೭ ಕ್ಕೆ ಶ್ರೀಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವರಿಗೆ ರಂಗಪೂಜೆ, ೭.೩೦ಕ್ಕೆ ವಿಷ್ಣುಮೂರ್ತಿ ನಾವೂರೇಶ್ವರ ದೇವರ ಉತ್ಸವ ಬಲಿ, ಅನ್ನಸಂತರ್ಪಣೆ, ವ್ಯಾಘ್ರ ಚಾಮುಂಡಿ ಕಲ್ಲುರ್ಟಿ ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಲಿದೆ.
