ಮೂಡುಬಿದಿರೆ: ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಯಲ್ಲಿ ಮೂಡುಬಿದಿರೆ ಶ್ರೀ ಜೈನ ಮಠಾದೀಶ ಭಟ್ಟಾರಕ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರ ಹಿರಿತನದಲ್ಲಿ ಶುಕ್ರವಾರ ರಾತ್ರಿ ಲಕ್ಷ ದೀಪೋತ್ಸವ ನಡೆಯಿತು.
ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ 108 ದಿವ್ಯ ಸಾಗರ ಮುನಿ ಮಹಾರಾಜ್, ಜ್ಞಾನ ಹಾಗೂ ಸತ್ಯದ ಬೆಳಕು ನಮ್ಮೊಳಗೆ ಮೊದಲು ಬೆಳಗಬೇಕು.ಸತ್ಯ ಮತ್ತು ಜ್ಞಾನದ ಮೂಲಕ ಸಮ್ಯಕ್ ಜ್ಞಾನಪ್ರಾಪ್ತಿಮಾಡಿಕೊಂಡು ಭಗವಂತನನ್ನು ನಮ್ಮೊಳಗೆ ಕಂಡುಕೊಳ್ಳಬಹುದಾಗಿದೆ. ಲಕ್ಷದೀಪೋತ್ಸವ ಇದಕ್ಕೊಂದು ಉತ್ತಮ ರೂಪಕವಾಗಿದೆ ಎಂದು ನುಡಿದರು.
ಭಟ್ಟಾರಕ ಸ್ವಾಮೀಜಿ ಸಂದೇಶ ನೀಡಿ, ಕೊರೊನಾ ನಿಯಂತ್ರಣಕ್ಕೆ ವಿಜ್ಞಾನಿಗಳು ಸಸ್ಯಾಹಾರಿ ಲಸಿಕೆ ತಯಾರಿಸಿಸುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಕಾರ್ಕಳದ ಹಿರಿಯ ವಕೀಲ ಎಂ.ಕೆ. ವಿಜಯಕುಮಾರ್, ರಾಜ್ಯಮಟ್ಟದ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ, ಎಂಸಿಎಸ್ ಬ್ಯಾಂಕ್ನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಪಿಎಚ್ಡಿ ಪದವಿ ಗಳಿಸಿರುವ ಶ್ರೀ ಧವಲಾ ಕಾಲೇಜಿನ ಡಾ.ಪದ್ಮಜಾ ಧೀರಜ್ ಅವರನ್ನು ಸನ್ಮಾನಿಸಲಾಯಿತು.
ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಸುದೇಶ ಕುಮಾರ್, ಎ. ದಿನೇಶ ಕುಮಾರ್ ಬೆಟ್ಕೇರಿ, ಜೈನ್ಮಿಲನ್ ಅಧ್ಯಕ್ಷೆ ಶ್ವೇತಾ ಜೈನ್, ಚೌಟರ ಅರಮನೆ ಕುಲದೀಪ ಎಂ. ಉಪಸ್ಥಿತರಿದ್ದರು. ಆಶುಕವಿ ರವಿರಾಜ್ ಜೈನ್ ಮೂಡುಬಿದಿರೆ ಅವರು ಭಕ್ತಿಗಾಯನ, ಗಣೇಶಪ್ರಸಾದ್ ಜೀ ಅವರು ಕವನವಾಚನ, ಅನನ್ಯಾ ಜೈನ್ ಅವರು ಭರತನಾಟ್ಯ ಹಾಗು ಮಹಾರಾಷ್ಟ್ರದ ಉದ್ಗಾಂವ್ನ ಜೈನಸಂಗೀತ ಗಾನರತ್ನಾಕರ ಕುಬೇರ ಚೌಗುಲೆ ಅವರು ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು. ಉಪನ್ಯಾಸಕ ನೇಮಿರಾಜ್ ನಿರೂಪಿಸಿದರು. ಬಳಿಕ ಚಂದ್ರಪ್ರಭಾ ಸ್ವಾಮಿಯ ಸನ್ನಿಧಿಯಲ್ಲಿ ಲಕ್ಷದೀಪೋತ್ಸವ ಜರಗಿತು.
