ಬಂಟ್ವಾಳ: ಪುತ್ತೂರು ತಾಲೂಕಿನಲ್ಲಿರುವ ಪಡುಮಲೆ ಕ್ಷೇತ್ರವನ್ನು ಸುಮಾರು ಒಂದು ಕೋ.ರೂ.ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾಗಿ ನಿರ್ಮಿಸಲಾಗಿದ್ದು, ಮುಂದಿನ ಮಾಚ್೯ ತಿಂಗಳ ಅಂತ್ಯದಲ್ಲಿ ಅಥವಾ ಎಪ್ರಿಲ್ ಮೊದಲ ವಾರದಲ್ಲಿ ಬ್ರಹ್ಮಕಲಶೋತ್ಸವದ ಮೂಲಕ ಲೋಕಾರ್ಪಣೆ ಗೊಳಿಸಲು ಯೋಚಿಸಲಾಗಿದೆ ಎಂದು ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಳ ಸಂಚಲನ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ತಿಳಿಸಿದ್ದಾರೆ. 
ಬಿ.ಸಿ.ರೋಡಿನ ಗಾಣದಪಡ್ಪು ಶ್ರೀ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ರವಿವಾರ ಸಂಜೆ ನಡೆದ ವಿವಿಧ ತಾಲೂಕಿನ ಪ್ರಮುಖರ ಸಮಾಲೋಚನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕ್ಷೇತ್ರದ ಚರಿತ್ರೆ-ಪುರಾಣಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಅಭಿವೃದ್ಧಿ ಕಾರ್ಯ ನಡೆಸಲಾಗಿದೆ. ಕ್ಷೇತ್ರಕ್ಕೆ ೧೦ ಮಂದಿ ಹಕ್ಕುದಾರರು ಜಾಗವನ್ನು ಉಚಿತವಾಗಿ ನೀಡಿದ್ದು, ಇಲ್ಲಿನ ರಸ್ತೆ ಅಭಿವೃದ್ದಿಗೂ ಪುತ್ತೂರು ಶಾಸಕರು ೫೦ ಲಕ್ಷ ರೂ. ನೀಡಿದ್ದಾರೆ ಎಂದರು.
ಕೋಟಿ ಚೆನ್ನಯರು ಯಾವುದೇ ಜಾತಿ,ಧರ್ಮಕ್ಕೆ ಸೀಮಿತವಲ್ಲ,ಅವರು ಇಡೀ ಮಾನವ ಕುಲಕ್ಕೆ ಸೇರಿದವರಾಗಿದ್ದು, ಈ ಲೋಕಾರ್ಪಣೆ ಕಾರ್ಯದಲ್ಲಿ ಸಮಸ್ತ ಹಿಂದೂ ಸಮಾಜ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸುವಂತೆ ಕರೆ ನೀಡಿದರು. ಕ್ಷೇತ್ರದ ಮೊಕ್ತೇಸರ ವಿನೋದ್ ಆಳ್ವ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗಾಗಿ ಕಳೆದ ಹಲವು ವರ್ಷಗಳಿಂದ ಪ್ರಯತ್ನ ನಡೆಸಿ ಎಲ್ಲರನ್ನೂ ಜತೆ ಸೇರಿಸಿ ಈ ಕಾರ್ಯ ಮಾಡಲಾಗಿದೆ. ಕಾಮಗಾರಿಗಳಲ್ಲಿ ೯೯.೫ ಶೇ. ಪೂರ್ಣಗೊಂಡಿದೆ ಎಂದರು.
ಸಮಿತಿ ಪ್ರಮುಖರಾದ ಚರಣ್ ಕೆ. ಅವರು ಮಾತನಾಡಿ, ಜನವರಿ ೧೪ರಂದು ಕ್ಷೇತ್ರದ ಕಚೇರಿ ಹಾಗೂ ಅತಿಥಿ ಗೃಹ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿ ವಂದಿಸಿದರು. ಇದೇ ವೇಳೆ ಆಶೋಕ ನಗರ ಬಿಲ್ಲವ ಸಂಘದ ವತಿಯಿಂದ ಕ್ಷೇತ್ರದ ಅಭಿವೃದ್ದಿಗೆ 50 ಸಾ.ರೂ.ದೇಣಿಗೆಯನ್ನು ಪ್ರಕಟಿಸಿತು.
