ಬಂಟ್ವಾಳ: ತಂತ್ರಜ್ಞಾನ ದ ಮೂಲಕ ಶಿಕ್ಷಣದ ಉದ್ದೇಶವನ್ನು ಈಡೇರಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೂಪಿಸಿರುವ ಜ್ಞಾನತಾಣ ಕಾರ್ಯಕ್ರಮ ವಿಶಿಷ್ಟವಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಗ್ರಾಮೀಣ ವಿದ್ಯಾರ್ಥಿ ಗಳಿಗಾಗಿ ಅನುಷ್ಠಾನ ನಗೊಳಿಸಲಾದ ” ಜ್ಞಾನತಾಣ ” ಕಾರ್ಯಕ್ರಮವನ್ನು ಸೋಮವಾರ ಬಂಟ್ವಾಳದ ಯೋಜನಾ ಕಛೇರಿಯಲ್ಲಿ ಉದ್ಘಾಟಿಸಿ, ಸಾಂಕೇತಿಕವಾಗಿ ವಿದ್ಯಾರ್ಥಿ ಗಳಿಗೆ ಲ್ಯಾಪ್ ಟಾಪ್ ಹಾಗೂ ಟ್ಯಾಬ್ ವಿತರಿಸಿ ಶಾಸಕರು ಮಾತನಾಡಿದರು.
ಕಾಲಕ್ಕೆ ಅಗತ್ಯವಾದ ಅನೇಕ ರೀತಿಯ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಜೊತೆಗೆ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕಾರ್ಯಗಳಲ್ಲಿ ಧರ್ಮಸ್ಥಳ ಕ್ಷೇತ್ರ ಹಾಗೂ ಗ್ರಾಮಾಭಿವೃದ್ಧಿ ಯೋಜನೆ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದೆ ಎಂದವರು ಶ್ಲಾಘಿಸಿದರು.ಇದೇ ಸಂದರ್ಭ ತಾಲೂಕಿಗೆ ಮೊದಲ ಹಂತದಲ್ಲಿ ಮಂಜೂರಾದ ಟ್ಯಾಬ್ ಹಾಗೂ ಲ್ಯಾಪ್ ಟಾಪ್ ಗಳನ್ನು ಶಾಸಕರು ಸಾಂಕೇತಿಕವಾಗಿ ವಿತರಿಸಿದರು.
ಜಿಲ್ಲಾ ನಿರ್ದೇಶಕ ಯೋಜನಾಧಿಕಾರಿ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿ,ಧರ್ಮಸ್ಥಳ ಯೋಜನೆಯಿಂದ ಶೈಕ್ಷಣಿಕ ಉದ್ಧೇಶಗಳಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಜ್ಞಾನತಾಣ ಯೋಜನೆಯ ಮೂಲಕ ಒಂದೇ ದಿನದಲ್ಲಿ ರಾಜ್ಯಾದ್ಯಂತ 20 ಸಾವಿರ ಟ್ಯಾಬ್ ಹಾಗೂ 10 ಸಾವಿರ ಲ್ಯಾಪ್ ಟಾಪ್ ಗಳನ್ನು ವಿತರಿಸಲಾಗುತ್ತಿದೆ ಎಂದರು.
ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷ ಎ.ಸಿ.ಭಂಡಾರಿ, ರೋಟರಿ ಕ್ಲಬ್ ನ ನಿಯೋಜಿತ ರಾಜ್ಯಪಾಲ ಪ್ರಕಾಶ್ ಕಾರಂತ್, ಶಿಕ್ಷಣ ಸಂಯೋಜಕಿ ಸುಜಾತ ಕುಮಾರಿ, ಬಂಟ್ವಾಳ ಜನಜಾಗೃತಿ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ತಾಲೂಕು ಯೋಜನಾಧಿಕಾರಿ ಜಯಾನಂದ ಸ್ವಾಗತಿಸಿದರು. ವಲಯ ಮೇಲ್ವಿಚಾರಕ ಕೇಶವ ವಂದಿಸಿದರು. ಅಮಿತ ಕಾರ್ಯಕ್ರಮ ನಿರ್ವಹಿಸಿದರು.


