ಕೈಕಂಬ:ವಿದ್ಯುತ್ ಸಂಪರ್ಕ ಕಾಣದೆ ಕತ್ತಲಲ್ಲಿರುವ ಅನೇಕ ಮನೆಗಳು ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಕಾಣ ಸಿಗುತ್ತವೆ ಎಂದರೆ ತಪ್ಪಾಗದು. ಗುರುಪುರದಿಂದ ಸ್ವಲ್ಪ ದೂರದಲ್ಲಿರುವ ನೂಯಿ ಇಂದಿರಾನಗರದಲ್ಲಿ ಕಳೆದ ೪೦ ವರ್ಷಗಳಿಂದ ವಿದ್ಯುತ್ ಬೆಳಕಿಲ್ಲದ ಚಿಮಿನಿ ದೀಪದಲ್ಲಿ ಮನೆಯೊಂದಿತ್ತು ಇದನ್ನು ಕಂಡ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿಯವರ ಗಮನಹರಿಸಿ, ವಿದ್ಯುತ್ ಸಂಪರ್ಕ ಹೊಂದುವಂತೆ ಮಾಡಿದ್ದಾರೆ .
ಗುರುಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ನೂಯಿ ಎಂಬಲ್ಲಿ ವಾಸಿಸುತ್ತಿರುವ ಯೋಗಿನಿ ಅವರ ಸಂಸಾರ ವಿದ್ದು ಮೂವರು ಮಕ್ಕಳು, ಗಂಡ ಹಾಗೂ ಮಾವ ಇರುವ ಮನೆಗೆ ವಿದ್ಯುತ್ ಬೆಳಕು ಕಾಣಲಿದೆ. ಯೋಗಿನಿಯವರ ಹಿರಿ ಮಗ ಯತಿರಾಜ್ ಮತ್ತು ಮಗಳು ಪಲ್ಲವಿ ಈಗ ಪದವಿ ತರಗತಿ ಸೇರ್ಪಡೆಯಾಗಿದ್ದು, ಕಲಿಯುವುದರಲ್ಲಿ ಮುಂದಿರುವ ಇವರ ವ್ಯಾಸಂಗ ಸುಗಮವಾಗಲೆಂದು ಕಳೆದ ವರ್ಷ ಪೊಳಲಿ ಸರ್ಕಾರಿ ಶಾಲೆಯ ಶಿಕ್ಷಕಿ ರಂಜಿತಾ ಅವರ ಶ್ರಮದ ಫಲವಾಗಿ ಬಂಟ್ವಾಳದ ರೋಟರಿ ಕ್ಲಬ್ನವರು ಉಚಿತವಾಗಿ ಒಂದರೆಡು ದೀಪಗಳಿಗೆ ಸೀಮಿತವಾದ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರು.
ಯತಿರಾಜ್ ಮತ್ತು ಪಲ್ಲವಿ ಪಿಯು ಪರೀಕ್ಷೆಯಲ್ಲಿ ಕ್ರಮವಾಗಿ ೯೪% ಮತ್ತು ೯೨% ಅಂಕ ಗಳಿಸಿದ್ದನ್ನು ಗಮನಿಸಿದ ಸ್ಥಳೀಯ ಉತ್ತರ ಮಂಡಲ ಬಿಜೆಪಿ ಕಾರ್ಯದರ್ಶಿ ಹರೀಶ್ ಬಳ್ಳಿ ಹಾಗೂ ಅವರ ಬಳಗ(ನಿಶಾಂತ್ ಬರ್ಕೆ, ಯಶವಂತ್ ಕುಲಾಲ್, ತಿಲಕ್ರಾಜ್(ನೂಯಿ ಬಿಜೆಪಿ ಬೂತ್ ಅಧ್ಯಕ್ಷ), ಸಂದೀಪ್ ಪೊಳಲಿ(ಅಡ್ಡೂರು ಶಕ್ತಿ ಕಂದ್ರ ಪ್ರಮುಖ್) ಬಡ ವಿದ್ಯಾರ್ಥಿಗಳಿಬ್ಬರ ಮುಂದಿನ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡಲೆಂದು ಮನೆಗೆ ಹೋದಾಗ, ಹಳೆ ಮನೆಗೆ ವಿದ್ಯುತ್ ಸಂಪರ್ಕ ಇಲ್ಲದಿರುವುದು ಬೆಳಕಿಗೆ ಬಂತು. ಈ ವೇಳೆ ಮಕ್ಕಳಿಗೆ ನೆರವಿಗಿಂತಲೂ ಮುಖ್ಯವಾಗಿ ಮನೆಗೆ ವಿದ್ಯುತ್ ಬೆಳಕು ಹರಿಸಿದರೆ ಹೇಗೆ ಎಂಬ ಯೋಚನೆ ಹರೀಶ್ ಮತ್ತು ಅವರ ಬಳಗದಲ್ಲಿ ಬಂತು. ಮನೆಯವರೂ ಇದಕ್ಕೆ ಒಪ್ಪಿಗೆ ಸೂಚಿಸಿದರು.
ಬಿಜೆಪಿ ಕಾರ್ಯಕರ್ತರ ಈ ಯೋಚನೆ, ಯೋಜನೆಗೆ ಮೆಸ್ಕಾಂ ಗುತ್ತಿಗೆದಾರ ನಿತೀನ್ ಎ ಬಂಗೇರ ಸಾಥ್ ನೀಡಿ, ಉಚಿತವಾಗಿ ವಿದ್ಯುತ್ ಸಂಪರ್ಕ ನೀಡುವುದಾಗಿ ಭರವಸೆ ನೀಡಿ ಕೆಲಸ ಆರಂಭಿಸಿದ್ದಾರೆ. ಶಾಸಕ ಡಾ. ಭರತ್ ಶೆಟ್ಟಿವರ ಸಮಯೋಚಿತ ಕೆಲಸದಿಂದ ವಿದ್ಯುತ್ ಸಂಪರ್ಕಕ್ಕೆ ಈವರೆಗಿದ್ದ ಅಡಚಣೆ ನಿವಾರಣೆಯಾಗಿದೆ. ಮೆಸ್ಕಾಂ ಸಹಕಾರವೂ ಸಿಕ್ಕಿದೆ.
” ಮೂವರು ಮಕ್ಕಳ ಶಿಕ್ಷಣ ನೀಡಲು ಬೆಳಕಿಲ್ಲದೆ ತೊಂದರೆ ಉಂಟಾದದ್ದು ಸತ್ಯ ನಾವು ಬಡತನದಲ್ಲೇ ಬದುಕುತ್ತಿರುವ ನಮ್ಮ ವರ್ಷಗಳ ಕನಸು ಈಗ ನನಸಾಗುತ್ತಿದೆ”. ಯೋಗಿನಿ
ನಮಗೆ ಸಹಕರಿಸಿದ ಶಾಸಕ ಡಾ. ಭರತ್ ಶೆಟ್ಟಿ, ಹರೀಶ್ ಬಳ್ಳಿ, ನಿತಿನ್ ಬಂಗೇರ ಹಾಗೂ ಬಿಜೆಪಿಯ ಇತರರಿಗೆ ಅಭಿನಂದನೆಗಳು. ತಾವೆಲ್ಲರೂ ನನ್ನ ಮಕ್ಕಳ ವಿದ್ಯಾಭ್ಯಾಸಕ್ಕೂ ಇದೇ ರೀತಿಯ ಸಹಕಾರ ನೀಡಲು ವಿನಂತಿಸಿಕೊಂಡಿದ್ದಾರೆ.
