ಮೂಡುಬಿದಿರೆ: ಉತ್ತರ ಪ್ರದೇಶದ ಹಾಥರಸ್ನಲ್ಲಿ ನಡೆದ ದಲಿತ ಯುವತಿ ಅತ್ಯಾಚಾರ ಪ್ರಕರಣ ಖಂಡಿಸಿ ಬಹುಜನ ಕ್ರಾಂತಿ ಮೋರ್ಚಾದ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಗುರುವಾರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಸಾಮಾಜಿಕ ಕಾರ್ಯಕರ್ತ ಶಿವಾನಂದ ಪಾಂಡ್ರು ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಅದಿತ್ಯನಾಥ್ ಯೋಗಿಯ ಮುಂದೆ ರಾಷ್ಟ್ರಪತಿ ತಲೆ ತಗ್ಗಿಸುವಂತಹ ಪರಿಸ್ಥಿತಿ ದೇಶದಲ್ಲಿದೆ. ಅಭಿವೃದ್ಧಿ ಮರೆತ ಮೋದಿ ಸರ್ಕಾರವು ಉದ್ಯೋಗ ಸೃಷ್ಟಿ, ಅರ್ಥಿಕ ಸಬಲೀಕರಣ ಮಾಡುವಲ್ಲಿ ಸೋತಿದ್ದಾರೆ. ಉತ್ತರ ಪ್ರದೇಶದ ಸಿಎಂ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಸೋತಿದ್ದು, ಅತ್ಯಾಚಾರದಂತಹ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದರು.
ಸಂವಿಧಾನ ಸಂರಕ್ಷಾ ಹೋರಾಟ ಸಮಿತಿಯ ಮುಖಂಡರಾದ ಅಚ್ಯುತ ಸಂಪಿಗೆ, ಹೋರಾಟದ ಪ್ರಮುಖರಾದ ಯಾದವ ಶೆಟ್ಟಿ, ಪ್ರಭಾಕರ ಮಾರ್ನಾಡು, ಬಾಬು ಎಂ., ಅಬ್ದುಲ್ ಕಯ್ಯೂಂ, ಕೃಷ್ಣಪ್ಪ ಕೊಣಾಜೆ, ನಝೀರ್ ಬೆಳುವಾಯಿ, ಅಬ್ದುಲ್ ಸಲ್ಮಾನ್, ರಾಜು ಗಂಟಾಲ್ಕಟ್ಟೆ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ, ಡಿ.ಎಸ್.ಎಸ್(ಭೀಮ ಘರ್ಜನೆ), ಡಿ.ಎಸ್.ಎಸ್( ಬಿ.ಕೃಷ್ಣಪ್ಪ ಸ್ಥಾಪಿತ) , ರಾಷ್ಟ್ರೀಯ ಮುಸ್ಲಿಂ ಮೋರ್ಚಾ, ಸಮಾಜ ಪರಿಷತ್ ವೇದಿಕೆ, ದಲಿತ ಹಕ್ಕುಗಳ ಹೋರಾಟ ಸಮಿತಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಸಂವಿಧಾನ ಸಂರಕ್ಷಣಾ ಸಮಿತಿ ಮೂಡುಬಿದಿರೆ, ಅಂಬೇಡ್ಕರ್ವಾದ ಮೂಡುಬಿದಿರೆ ಸಹಯೋಗದೊಂದಿಗೆ ಪ್ರತಿಭಟನೆಯನ್ನು ಆಯೋಜಿಸಲಾಯಿತು.
