ಬಂಟ್ವಾಳ:ಕ್ಷುಲ್ಲಕ ಕಾರಣಕ್ಕೆ ಅನ್ಯಕೋಮಿನ ಯುವಕರ ತಂಡವೊಂದು ಯುವ ಉದ್ಯಮಿಯೋರ್ವರ ಹೊಟ್ಟೆಗೆ ಸೋಡಾ ಬಾಟ್ಲಿಯಿಂದ ತಿವಿದು ಕೊಲೆಗೆ ಯತ್ನಿಸಿದ್ದಲ್ಲದೆ  ತಡೆಯಲು ಬಂದ ಗಾಯಾಳುವಿನ ಸ್ನೇಹಿತರಿಗೂ ಹಲ್ಲೆಗೈದು, ಕಾರನ್ನು ಜಖಂಗೊಳಿಸಿದ ಘಟನೆ ಭಾನುವಾರ ರಾತ್ರಿ ಫರಂಗಿಪೇಟೆ ಸಮೀಪದ ಕಲ್ಲತಡಮೆ ಎಂಬಲ್ಲಿ ಸಂಭವಿಸಿದೆ.

ಕುಂಪನಮಜಲು ನಿವಾಸಿಉದ್ಯಮಿ ಧನರಾಜ್ ಶೆಟ್ಟಿ ಆರೋಪಿಗಳ ಸೋಡಾ ಬಾಟ್ಲಿ ತಿವಿತದಿಂದ ಗಂಭೀರ ಸ್ವರೂಪದ  ಗಾಯಗೊಂಡು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ,ಘಟನೆಯ ವೇಳೆ ತಡೆಯಲು ಬಂದ ಇವರ ಸ್ನೇಹಿತರಾದ ರಾಜೇಶ್,ಸಂತೋಷ್,ಪುಷ್ಪರಾಜ್ ಅವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ‌.

ಸ್ಥಳೀಯ ಯುವಕರಾದ ಕುಂಟ  ಶರೀಫ್, ಹಿದಾಯತ್ ,ಅಶ್ರಫ್ ಹಾಗೂ ಮತ್ತಿತರರು ಸೇರಿಕೊಂಡು ಈ ಕೃತ್ಯ ನಡೆಸಿದ್ದಾರೆ. ಧನರಾಜ್ ಶೆಟ್ಟಿ ಮತ್ತು ಆರೋಪಿಗಳ ಪೈಕಿ ಹಿದಾಯತ್ ಮಧ್ಯ ಉರುಡಾಟ ನಡೆದಾಗ ಧನರಾಜ್ ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಸಿಯಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಧನ್ ರಾಜ್ ಪರಂಗಿಪೇಟೆಯಲ್ಲಿ ಸಾಮಾನು ಖರೀದಿಸಿ ವಾಪಾಸ್ ಮನೆಗೆ ಹೋಗುವ ಸಂದರ್ಭ ನೆರೆ ಮನೆಯವರಾದ ರಾಜೇಶ್,ಸಂತೋಷ್,ಪುಷ್ಪರಾಜ್ ಅವರನ್ನು ಕಾರಿನಲ್ಲಿ ಕೂರಿಸಿ ಮನೆಯತ್ತ ತೆರಳುತ್ತಿದ್ದರೆನ್ನಲಾಗಿದೆ.

ಈ ಸಂದರ್ಭ ಕಲ್ಲತಡಮೆಯ ಬಳಿ ಅಂಗಡಿಯೊಂದರ ಎದುರು ಆರೋಪಿಗಳು ಅಡ್ಡಾದಿಡ್ಡಿಯಾಗಿ ದ್ವಿಚಕ್ರವಾಹನ ನಿಲುಗಡೆಗೊಳಿಸಿ ಇತರ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟುಮಾಡಿದ್ದರೆನ್ನಲಾಗಿದೆ. ಪರಿಣಾಮ ಕಾರು ಚಲಾಯಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಧನ್ ರಾಜ್ ಅವರು ಅಂಗಡಿ ಮಾಲಕಿಯವರಲ್ಲಿ ಇದನ್ನು ಪ್ರಶ್ನಿಸಿದ್ದು, ಆಗ ಅಂಗಡಿ ಮಾಲಕಿ ಇತರ ವಾಹನಗಳ ಸಂಚಾರಕ್ಕೆಅಡ್ಡಿಯಾಗದಂತೆ ವಾಹನ ತೆರವುಗೊಳಿಸಲು ಯುವಕರಿಗೆ ತಿಳಿಸಿದಾಗ ಹಿದಾಯತ್ ಎಂಬಾತ ಧನ್ ರಾಜ್ ಗೆ ಅವಾಚ್ಯವಾಗಿ ನಿಂದಿಸಿ ಕೈಯಿಂದ ಹಲ್ಲೆಗೈದಿದ್ದಾನೆನ್ನಲಾಗಿದೆ.

ಆಗ ಕಾರಿನಿಂದ ಇಳಿದ ಮೂವರು ಮಧ್ಯಪ್ರವೇಶಿಸಿದ್ದು,ಇದೇವೇಳೆ ಕುಂಟ ಶರೀಫ್,ಅಶ್ರಫ್ ಮತ್ತಿತರ ಏಳೆಂಟು ಮಂದಿ ಯುವಕರು ಜಮಾಯಿಸಿ ಇವರಿಗೆ ಹಲ್ಲೆಗೈದಿದ್ದಾರೆ.ಹಿದಾಯತ್ ಅಂಗಡಿಯಲ್ಲಿದ್ದ ಸೋಡಾ ಬಾಟ್ಲಿಯನ್ನು ಪುಡಿಗೈದು ಧನ್ ರಾಜ್ ಹೊಟ್ಟೆ ಭಾಗಕ್ಕೆ ತಿವಿದಿದ್ದಲ್ಲದೆ ತಲವಾರನ್ನು ಬೀಸಿದ್ದಾನೆ ಹಾಗೆಯೇ ಇವರ ಕಾರನ್ನು ಕೂಡ ಜಖಂಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ. ಗಾಯಾಳುಗಳು ಬೊಬ್ಬೆ ಹೊಡೆದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ .ಈ ಬಗ್ಗೆ ಧನ್ ರಾಜ್ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು,ಮುಂದಿನ ತನಿಖೆ ನಡೆಯುತ್ತಿದೆ.

By suddi9

Leave a Reply

Your email address will not be published. Required fields are marked *