ಕಾರ್ಕಳ: ಪ್ರಸಿದ್ಧ ಶಿಲ್ಪಿ, ಕರ್ನಾಟಕ ಶಿಲ್ಪಕಲಾ ರತ್ನ, ಕರುನಾಡ ಪದ್ಮಶ್ರೀ ಸಹಿತ ಅನೇಕ ಗೌರವಗಳಿಗೆ ಪಾತ್ರರಾಗಿದ್ದ ಕೆ.ಶಿವರಾಮ ಆಚಾರ್ಯ (೫೫) ಅವರು ಹೃದಯಾಘಾತದಿಂದ ಸೋಮವಾರ ಬೆಂಗಳೂರಿನಲ್ಲಿ ನಿಧನರಾದರು.ದೇವಾಲಯ. ದೈವಾಲಯಗಳು, ಮೂರ್ತಿಗಳ ನಿರ್ಮಾಣದಲ್ಲಿ ನಿಷ್ಣಾತರಾಗಿದ್ದ ಅವರು ರಾಜ್ಯದ ಮತ್ತು ಮುಂಬಯಿ ಸೇರಿ ವಿವಿದೆಡೆ ಶಿಲಾ ದೇವಾಲಯಗಳನ್ನು ನಿರ್ಮಿಸಿ ಖ್ಯಾತರಾಗಿದ್ದರು. 
ಶಿಲ್ಪಕಲಾ ಅಕಾಡೆಮಿಯ ಮೊದಲ ಅಧ್ಯಕ್ಷರಾದ ಶ್ಯಾಮರಾಯ ಆಚಾರ್ಯ ಅವರ ಶಿಷ್ಯರಾಗಿ ಭಾರತೀಯ ಶಿಲ್ಪಶಾಸ್ತ್ರದ ಅನುಭವ ಹೊಂದಿದ್ದರು. ಹಿಂದೆ ಅವರು ಕಾರ್ಕಳದ ಬಾಹುಬಲಿ ಮಸ್ತಕಾಭಿಷೇಕ ಸಂದರ್ಭ ಸಹಿತ ಕೆಲವು ಕಡೆಗಳಲ್ಲಿ ತಮ್ಮ ರಚನೆಯ ಶಿಲ್ಪ ಕಲಾಕೃತಿಗಳನ್ನು ಪ್ರದರ್ಶಿಸಿ ಪ್ರಶಂಸೆಗೆ ಪಾತ್ರರಾಗಿದ್ದರು.ದೇವಾಲಯ ನಿರ್ಮಾಣದ ಸಂದರ್ಭಗಳಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾಧ ವೀರೇಂದ್ರ ಹೆಗ್ಗಡೆ, ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿಜಿ, ಕೇಮಾರು ಈಶ ವಿಠಲದಾಸ ಸ್ವಾಮಿಜಿ ಸಹಿತ ನಾಡಿನ ಅನೇಕ ಸ್ವಾಮಿಜಿಗಳಿಂದ ಗೌರವ ಸ್ವೀಕರಿಸಿದ್ದರು.
ಕಾರ್ಕಳ ಕುಕ್ಕುಂದೂರಿನಲ್ಲಿ ಶ್ರೀ ದುರ್ಗಾ ಶಿಲ್ಪಕಲಾ ಹೆಸರಿನ ಶಿಲಾಶಿಲ್ಪ ತಯಾರಿಯ ಕೇಂದ್ರವನ್ನು ಮತ್ತು ಎರ್ಲಪಾಡಿ ಬಳಿ ಶಿಲ್ಪ ತಯಾರಿಯ ಆಧುನಿಕ ಸಂಸ್ಥೆಯನ್ನು ಹೊಂದಿದ್ದರು. ಕಿರಿಯ ವಯಸ್ಸಿನಲ್ಲಿಯೇ ಸಾಧನೆ ಮಾಡಿದ ಅವರು ಹತ್ತಾರು ಶಿಷ್ಯರನ್ನು ಹೊಂದಿದ್ದಾರೆ. ಗೋವಾದಲ್ಲಿ ನಡೆದ ಹೊರನಾಡ ಕನ್ನಡಿಗರ ಸಮ್ಮೇಳನದಲ್ಲಿ ಕರುನಾಡ ಪದ್ಮಶ್ರೀ, ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಶಿಲ್ಪಕಲಾ ರತ್ನ ಗೌರವವನ್ನು, ಕಾಸರಗೋಡು ದಸರಾದಲ್ಲಿ ದಸರಾ ಗೌರವ, ಮೈಸೂರು ಬುದ್ಧಿ ಜೀವಿಗಳ ಬಳಗ ಶಿಲ್ಪ ಕಲಾ ಸಾಧನಾ ಗೌರವ, ಕಾಸರಗೋಡಿನ ವಿಶ್ವದರ್ಶನ ಪ್ರಶಸ್ತಿ ಸಹಿತ ಅನೇಕ ಗೌರವಗಳಿಗೆ ಪಾತ್ರರಾಗಿದ್ದರು.ಅವರು ನಾಲ್ವರು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
