ಪೊಳಲಿ: ಕಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ರಾಜ್ಯದಾದ್ಯಂತ ಸುದ್ದಿ ಮಾಡಿದ್ದ ಬಂಟ್ವಾಳ ಎಸ್ ವಿ ಎಸ್ ಹೈಸ್ಕೂಲಿನ ವಿದ್ಯಾರ್ಥಿ ಕೌಶಿಕ್ನನ್ನು ರಾಜ್ಯದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಪೊಳಲಿ ಕ್ಷೇತ್ರದಲ್ಲಿ ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು. ಯಾವ ಪರೀಕ್ಷೆ ಹೇಗಿತ್ತು ಎಂಬ ಮಾಹಿತಿ ಕೇಳಿದರು. ನಿನ್ನ ಸಾಧನೆಯ ಕುರಿತು ಅದೇ ದಿನ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದೆ ಎಂದು ನೆನಪಿಸಿದರು. ಇದೇ ವೇಳೆ ಅತನ ಪಠ್ಯೇತರ ಚಟುವಟಿಕೆ,ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ ಸಚಿವರು ನೀನೇ ನಮಗೆ ಸ್ಫೂರ್ತಿ ಎಂದು ಶಹಭಾಸ್ ಗಿರಿ ವ್ಯಕ್ತಪಡಿಸಿದರು.
ಎಸ್ಎಸ್ಎಲ್ಸಿ ಪರೀಕ್ಷೆಗೆ ಸಾಮಾನ್ಯವಾಗಿ ವಿಶೇಷ ಚೇತನರು ಸಹಾಯಕನನ್ನು ಇಟ್ಟುಕೊಳ್ಳುವ ಅವಕಾಶ ಇರುತ್ತದೆ. ಆದರೆ, ಕೌಶಿಕ್ ಎಲ್ಲವನ್ನೂ ನಿರಾಕರಿಸಿ ಪರೀಕ್ಷೆಯನ್ನು ನಿಗದಿತ ಸಮಯದೊಳಗೆ ಸುಲಲಿತವಾಗಿ ತನ್ನ ಕಾಲಬೆರಳಲ್ಲೆ ಬರೆದಿದ್ದಾನೆ. ಇದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಗಮನ ಸೆಳೆದಿತ್ತು. ಮೊದಲ ಪರೀಕ್ಷೆಯಂದೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಮ್ಮ ಟ್ವೀಟರ್,ಫೇಸ್ ಬುಕ್ ನಲ್ಲಿ ಕೌಶಿಕ್ ಗೆ ಅಭಿನಂದಿಸಿದ್ದರು.

ಪೊಳಲಿಯಲ್ಲಿ ಸಚಿವರು ಕೌಶಿಕ್ ನಿಂದ ಮತ್ತೆ ಕಾಲಬೆರಳ ಮೂಲಕ ಬರೆಸಿಕೊಂಡು ಭೇಷ್ ಅಂದರು, ಬಳಿಕ ಆಪ್ತ ಸಹಾಯಕನನ್ನು ಕರೆದು ಕೌಶಿಕ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು.ಈ ಸಂದರ್ಭ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಮೊದಲಾದವರಿದ್ದರು.
