ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ರಾಜ್ಯ ಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್ ದಂಪತಿಯೊಂದಿಗೆ ಆಗಮಿಸಿ ಪೊಳಲಿ ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ರಾಜ್ಯದಲ್ಲಿ ಎಸೆಸೆಲ್ಸಿ ಪರೀಕ್ಷೆ ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ ಶುಕ್ರವಾರ ಭೇಟಿ ನೀಡಿದರು.
ಬಳಿಕ ಮಾತನಾಡಿದ ಅವರು ಎಲ್ಕೆಜಿಯಿಂದ 5ನೇ ತರಗತಿವರೆಗೆ ಆನ್ಲೈನ್ ಶಿಕ್ಷಣ ಅಗತ್ಯವಿಲ್ಲ ಎಂದು ಸರಕಾರ ಆದೇಶ ಹೊರಡಿಸಲಾಗಿತ್ತು. ಕೇಂದ್ರ ಸರಕಾರ ಒಂದಷ್ಟು ಮಾನದಂಡಗಳನ್ನು ಪ್ರಕಟಿಸಿದ ಆಧಾರದಲ್ಲಿ ಮಕ್ಕಳಿಗೆ ಒತ್ತಡ ಆಗದಂತೆ ಜೂ. 27ಕ್ಕೆ ನಾವು 2ನೇ ಆದೇಶವನ್ನು ನೀಡಿದ್ದೆವು. ಆದರೆ ಹೈಕೋರ್ಟ್ ನಮ್ಮ ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆಯನ್ನು ನೀಡಿ, ಆನ್ಲೈನ್ ಶಿಕ್ಷಣ ಪ್ರತಿ ಮಗುವಿನ ಮೂಲಭೂತ ಹಕ್ಕು ಎಂದು ತಿಳಿಸಿತ್ತು. ಹೀಗಾಗಿ ಆ ತೀರ್ಪನ್ನು ಅಧ್ಯಯನ ಮಾಡಲಿದ್ದೇವೆ. ಚಂದನ, ದೂರದರ್ಶನದ ಮೂಲಕ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೇತುಬಂಧ ಕಾರ್ಯಕ್ರಮದಲ್ಲಿ ಪ್ರಸಾರಮಾಡಲಿದ್ದೇವೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆ ಇಡೀ ದೇಶದ ಗಮನ ಸೆಳೆದಿದ್ದು, ಜು. 13ರಿಂದ ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಆತ್ಮಮೌಲ್ಯಮಾಪನ ಕಾರ್ಯ ನಡೆಯಲಿದೆ. ಮುಂದಿನ ವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಳ್ಳಲಿದ್ದು, ಬಹುತೇಕ ಆಗಸ್ಟ್ ಎರಡನೇ ವಾರದಲ್ಲಿ ಎಸೆಸೆಲ್ಸಿ ಫಲಿತಾಂಶವನ್ನು ನೀಡಲಿದ್ದೇವೆ. ಜತೆಗೆ ಮುಂದೆ ಪರಿಸ್ಥಿತಿ ತಿಳಿಯಾದ ಬಳಿಕ ಪೋಷಕರ ಅಭಿಪ್ರಾಯ ಪಡೆದು ಶಾಲೆಗಳನ್ನು ಪ್ರಾರಂಭಿಸುವ ತೀರ್ಮಾನ ಕೈಗೊಳ್ಳಲಿದ್ದೇವೆ. ಶಾಲೆಗಳ ಶುಲ್ಕ ಏರಿಕೆ ಮಾಡದಂತೆಯೂ ಖಾಸಗಿ ಶಾಲೆಗಳಿಗೆ ಸುತ್ತೋಲೆ ನೀಡಿದ್ದೇವೆ. ಈ ಕುರಿತು ದೂರುಗಳಿದ್ದರೆ ಸಹಾಯವಾಣಿ ಮೂಲಕ ದೂರನ್ನು ನೀಡಬಹುದಾಗಿದೆ.
ಆನ್ಲೈನ್ ಶಿಕ್ಷಣದ ಕುರಿತು ಸಾಕಷ್ಟು ದೂರಗಳ ಜತೆ ಪೋಷಕರಲ್ಲಿ ಗೊಂದಲಗಳಿದ್ದು, ಹೀಗಾಗಿ ಆನ್ಲೈನ್ ಶಿಕ್ಷಣದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯದ ಹಿಂದಿನ ಏಳು ಶಿಕ್ಷಣ ಸಚಿವರ ಜತೆಗೆ ಮುಂದಿನ ಶುಕ್ರವಾರ(ಜು. 17)ದಂದು ಸಭೆ ನಡೆಸಲಿದ್ದೇವೆ. ಖಾಸಗಿ ಶಾಲೆಗಳ ಶಿಕ್ಷಕರಿಗೆ ಸಂಬಳವಿಲ್ಲದೆ ಅವರ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದ್ದು, ಅವರಿಗೆ ನೆರವಾಗುವ ದೃಷ್ಟಿಯಿಂದ ರಾಜ್ಯದ ಪ್ರೌಢ ಹಾಗೂ ಪ್ರಾಥಮಿಕ ಶಿಕ್ಷಕರ ಸಂಘಗಳ ಅಧ್ಯಕ್ಷರುಗಳ ಜತೆ ಮಾತುಕತೆ ನಡೆಸಿದ್ದು, ಅವರು ತಮ್ಮ ಸಂಬಳದಿಂದ ನೆರವು ನೀಡುವುದಕ್ಕೆ ಪೂರಕ ಸ್ಪಂದನೆ ವ್ಯಕ್ತಪಡಿಸಿದ್ದು, ನಾವು ಕೂಡ ಅದಕ್ಕೆ ಒಂದಷ್ಟು ಮೊತ್ತವನ್ನು ಸೇರಿಸಿ ನೆರವನ್ನು ನೀಡಲಿದ್ದೇವೆ ಎಂದರು.ಪೊಳಲಿಯ ತಾಯಿ ಶ್ರೀ ರಾಜರಾಜೇಶ್ವರಿ ನಮ್ಮ ಮಕ್ಕಳಿಗೆಲ್ಲಾ ಆಶೀರ್ವಾದ ಮಾಡಿದ್ದು, ಎಸೆಸೆಲ್ಸಿ ಪರೀಕ್ಷೆ ಯಶಸ್ವಿಯಾಗಿ ನಡೆಯುವಂತೆ ಹಾರೈಸಿದ್ದಾಳೆ. ಹೀಗಾಗಿ ಎಲ್ಲಾ ಮಕ್ಕಳ ಪರವಾಗಿ ತಾಯಿಗೆ ಧನ್ಯವಾದ ತಿಳಿಸಲು ಬಂದಿದ್ದೇನೆ ಎಂದು ಶಿಕ್ಷಣ ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಎಸೆಸೆಲ್ಸಿ ಯಲ್ಲಿ ಕಾಲಿನಲ್ಲೆ ಬರೆದು ಗಮನ ಸೆಳೆದ ಕೌಸಿಕ್ ಅವರನ್ನು ಸಚಿವರು ಕಾಲಿನಲ್ಲಿ ಬರೆಯಿಸಿ ಶಹಭ್ಬಾಸ್ಗಿರಿ ನೀಡಿ ಅಭಿನಂದಿಸಿದರು. ಸಚಿವರ ಪತ್ನಿ ಕೆ.ಎಚ್.ಸಾವಿತ್ರಿ ಅವರು ಜತೆಗಿದ್ದರು. ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು ಅವರು ಕ್ಷೇತ್ರದ ಮಹಿಮೆಯನ್ನು ಸಚಿವರಿಗೆ ವಿವರಿಸಿದರು. ಪೊಳಲಿ ಕ್ಷೇತ್ರದ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್ ಪ್ರಸಾದ ನೀಡಿದರು. ದೇವಳದ ಆಡಳಿತ ಮೊಕ್ತೇಸರ ಡಾ| ಮಂಜಯ್ಯ ಶೆಟ್ಟಿ, ಮೊಕ್ತೇಸರ ಚೇರ ಸೂರ್ಯನಾರಾಯಣ ರಾವ್, ಮೂ ಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ.ಮೋಹನ್ ಆಳ್ವ, ಗಿರೀಶ್ ತಂತ್ರಿ ಪೊಳಲಿ, ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಡಿಡಿಪಿಐ ಮಲ್ಲೇಸ್ವಾಮಿ, ಇಒ ರಾಜಣ್ಣ, ತಹಶೀಲ್ದಾರ್ ರಶ್ಮಿ ಎಸ್.ಆರ್, ಡಿವೈಎಸ್ಪಿ ವೆಲೆಂಟೈನ್ ಡಿಸೋಜ, ಪೋಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್, ಪಿಎಸ್ಐ ಪ್ರಸನ್ನ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ತಾ. ಪಂ ಸದಸ್ಯ ಯಶವಂತ ಪೂಜಾರಿ, ಪ್ರಕಾಶ್ ಅಂಚನ್ ವೆಂಕಟೇಶ್ ನಾವಡ ಪೊಳಲಿ, ಭುವನೇಶ್ ಪಚಿನಡ್ಕ , ಜನಪ್ರತಿನಿದಿಗಳು,ಹಾಗೂ ಇಲಾಖೆಗಳ ಪ್ರಮುಖರು ಉಪಸ್ಥಿತರಿದ್ದರು.


