ಬಂಟ್ವಾಳ : ಪ್ರಸ್ತುತ ಕೋವಿಡ್ 19 ಸಂಕಷ್ಟವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ನಮ್ಮ ಶಿಕ್ಷಣ ಕ್ರಮದಲ್ಲಿ ಅನಿವಾರ್ಯವಾಗಿ ಬದಲಾವಣೆಯ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಬೋಧಕನೂ ಆಧುನಿಕ ತಂತ್ರಜ್ಞಾನವನ್ನು ಕಲಿತು, ಅರಗಿಸಿಕೊಂಡು ವಿದ್ಯಾರ್ಥಿಗಳಿಗೆ ಪಾಠ-ಪ್ರವಚನವನ್ನು ಮಾಡಬೇಕಾಗಿದೆ ಎಂದು ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ. ಎನ್. ಗಂಗಾಧರ ಆಳ್ವ ಹೇಳಿದರು.
ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳ ಬೋಧಕರಿಗೆ ಏರ್ಪಡಿಸಿದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದ ಅವರು ಕೊರೋನಾ ವೈರಸ್ ಹಾವಳಿಯ ಅನಿಶ್ಚಿತತೆ ಇರುವುದರಿಂದ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಎಲ್ಲ ಶಿಕ್ಷಕ-ಉಪನ್ಯಾಸಕ ವೃಂದವು ‘ ಆನ್ಲೈನ್ ಕ್ಲಾಸ್ ’ ಗೆ ಸನ್ನದ್ಧರಾಗಬೇಕು ಎಂದರು. ಸ್ಮಾರ್ಟ್ ಫೋನ್, ಲ್ಯಾಪ್ಟಾಪ್ ಮುಂತಾದ ಎಲೆಕ್ಟ್ರಾನಿಕ್ ಸಲಕರಣೆಗಳ ಸಹಾಯದಿಂದ ಪರಿಣಾಮಕಾರಿಯಾದ ಆನ್ಲೈನ್ ತರಗತಿಗಳನ್ನು ನಡೆಸುವುದು ಹೇಗೆ ಎಂಬುದಾಗಿ ಸಂಸ್ಥೆಯ ಸಿಬ್ಬಂದಿ ಹಾಗೂ ತರಬೇತುದಾರ ಯೋಗೀಶ್ ಬೊಳ್ಳಾರಿ ಅವರು ಮಾಹಿತಿ ನೀಡಿದರು. ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಬಿ. ಅಬ್ದುಲ್ ಸಲಾಂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕರಾದ ಬಿ. ಅಬ್ದುಲ್ ಕಬೀರ್ ಅವರು ಲಾಕ್ಡೌನ್ ಮತ್ತು ಸೀಲ್ಡೌನ್ ನಡುವೆಯೂ ಶಿಕ್ಷಣ ಸಂಸ್ಥೆ ತನ್ನ ಕಾರ್ಯ ಚಟುವಟಿಕೆಗಳನ್ನು ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದ ಬಗೆಯನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಪರೀಕ್ಷೆಗಳನ್ನು ನಡೆಸಲು ನಾನಾ ಬಗೆಗಳಲ್ಲಿ ಸಹಕರಿಸಿದ ತುಂಬೆ ಗ್ರಾಮ ಪಂಚಾಯತ್ ಸದಸ್ಯರಾದ ಝಹೂರ್ ಹಾಗೂ ಪೋಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕಿನ ಪದಾಧಿಕಾರಿಗಳನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಸಂಸ್ಥೆಯ ಶಿಕ್ಷಕಿ ರೇಖಾ ಅವರನ್ನು ಅಭಿನಂದಿಸಲಾಯಿತು. ಗುರುಪುರದ ಪ್ರಾಕೃತಿಕ ವಿಕೋಪದಲ್ಲಿ ಮತ್ತು ಕೋವಿಡ್ 19 ಸೋಂಕಿನಿಂದ ಮಡಿದ ಸಮಸ್ತರಿಗೆ ಮೌನ ಪ್ರಾರ್ಥನೆಯ ಮೂಲಕ ಶೃದ್ದಾಂಜಲಿ ಅರ್ಪಿಸಲಾಯಿತು. ತುಂಬೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶ್ರೀನಿವಾಸ ಕೆದಿಲ ವಂದಿಸಿದರು.
