ವೀರು ಶೆಟ್ಟಿಯವರ ಹೊಸ ಸಿನಿಮಾ” ಹಾಸ್ಯ ದಿಗ್ಗಜ್ಜರೊಂದಿಗೆ ಗರಿಗೆದರಲಿದೆ ತುಳು ಚಿತ್ರ
ಚಾಲಿಪೋಲಿಲು ತುಳುಚಿತ್ರರಂಗದಲ್ಲೇ ಅದ್ಭುತ ದಾಖಲೆ ಮಾಡಿದ ಸಿನಿಮಾ. ಈ ಚಿತ್ರ 511 ದಿನ ಪ್ರದರ್ಶನ ಕಾಣುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಿಸುವುದರ ಜತೆಗೆ ಪರಭಾಷಿಗರು ಕೋಸ್ಟಲ್ವುಡ್ನಂತ ತಿರುಗಿ ನೋಡುವಂತೆ ಮಾಡಿತ್ತು. ಇದರ ಕೀರ್ತಿ ನಿರ್ದೇಶಕ ವೀರೇಂದ್ರ ಶೆಟ್ಟಿಗೆ ಸಲ್ಲುತ್ತದೆ.
ಇದೀಗ ವೀರೇಂದ್ರ ಶೆಟ್ಟಿ ಮತ್ತೆ ಕೋಸ್ಟಲ್ವುಡ್ನತ್ತ ಮುಖ ಮಾಡಿದ್ದಾರೆ. ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು ಈ ಹಾಸ್ಯ ದಿಗ್ಗಜ್ಜರು ಮತ್ತೆ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುವ ಕಥೆಯೊಂದನ್ನು ಸಿದ್ಧಪಡಿಸಿದ್ದು, ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ.
ಚಾಲಿಪೊಲಿಲು ಬಳಿಕ ವೀರೇಂದ್ರ ಶೆಟ್ಟಿ ಕೆಲವು ವರ್ಷಗಳ ಗ್ಯಾಪ್ ಕೊಟ್ಟು ಕನ್ನಡದಲ್ಲಿ ‘ಸವರ್ಣದೀರ್ಘ ಸಂಧಿ’ ಸಿನಿಮಾ ನಿರ್ದೇಶಿಸಿ, ನಟಿಸಿ ಸೈ ಎನಿಸಿಕೊಂಡಿದ್ದರು. ಬಳಿಕ ಮತ್ತೊಂದು ಕನ್ನಡ ಸಿನಿಮಾ ನಿರ್ದೇಶನಕ್ಕೆ ತಯಾರಿ ನಡೆಸಿದ್ದರೂ ಕರೊನಾ ಮಹಾಮಾರಿಯಿಂದಾಗಿ ಆ ಯೋಜನೆಯನ್ನು ಸ್ವಲ್ಪದಿನ ಮುಂದೂಡಿ ತುಳುವಿನತ್ತ ಗಮನ ವಹಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆಯಾದರೆ ನವೆಂಬರ್ ಮೊದಲ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ. ಈ ಸಿನಿಮಾ ತುಳುವಿನಲ್ಲಿ ಕೆಲವೊಂದು ಹೊಸ ದಾಖಲೆಗಳಿಗೆ ಕಾರಣವಾಗಲಿದೆ ಎನ್ನುತ್ತಾರೆ ವೀರೇಂದ್ರ ಶೆಟ್ಟಿ.
ಚಾಲಿಪೋಲಿಲು ಸಿನಿಮಾದಲ್ಲಿ ತುಳುನಾಡಿನ ಈ ನಾಲ್ವರು ಮಾಡಿದ ಮೋಡಿಗೆ ಜನ ಫುಲ್ ಫಿದಾ ಆಗಿದ್ದರು. ತುಳು ನಾಟಕಗಳಲ್ಲಿ ಹೊಟ್ಟೆ ಹುಣ್ಣಾಗುವಷ್ಟು ನಗಿಸುವ ಅವರ ಕಾಂಬಿನೇಷನ್ ಬೆಳ್ಳಿ ಪರದೆ ಮೇಲೂ ಹೊಸ ಸಂಚಲನ ಮೂಡಿಸಿತ್ತು. ಈ ಕಲಾವಿದರು ಒಂದೇ ಸಿನಿಮಾದಲ್ಲಿ ಅಭಿನಯಿಸಿದ್ದು, ಬೆರಳೆಣಿಕೆಯಷ್ಟು ಮಾತ್ರ. ಆದರೆ ಬಂದಿರುವ ಹೆಚ್ಚಿನ ಸಿನಿಮಾಗಳು ಸೂಪರ್ಹಿಟ್ ಆಗಿತ್ತು. ವೀರು ಶೆಟ್ಟಿಯವರ ಹೊಸ ಸಿನಿಮಾ ಏನು ಮೋಡಿ ಮಾಡಲಿದೆ ಎನ್ನುವುದನ್ನು ಕಾದುನೋಡಬೇಕಾಗಿದೆ.
* ರಚನ್