ಬಂಟ್ವಾಳ: ಭಾರತೀಯ ಜೈನ್ ಮಿಲನ್ ಬಂಟ್ವಾಳ ಶಾಖೆಯ ಮಾಸಿಕ ಸಭೆಯು ಬಂಟ್ವಾಳದ ಜಿನಚೈತ್ಯಾಲಯದಲ್ಲಿ ಮಿಲನ್ ಅಧ್ಯಕ್ಷರಾದ ಡಾ.ಸುದೀಪ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.ಇದಕ್ಕು ಮುನ್ನ ಕೊರೋನ ವೈರಸ್ ಸಂಕಷ್ಟದಿಂದ ಜನರನ್ನು ಪಾರುಮಾಡಿ ನೆಮ್ಮದಿಯ ವಾತಾವರಣ ಉಂಟಾಗುವ ನಿಟ್ಟಿನಲ್ಲಿ ಜಿನ ಚೈತ್ಯಾಲಯದಲ್ಲಿ ವಿವಿಧ ಧಾರ್ಮಿಕ,ವಿಶೇಷ ಪೂಜೆಗಳನ್ನು ನಡೆಸಲಾಯಿತು.
ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಕ್ಷಯಕುಮಾರ್ ಮಾತನಾಡಿ, ನಮ್ಮ ಧಾರ್ಮಿಕ ಕಟ್ಟುಪಾಡುಗಳು ಮನುಷ್ಯನ ನಂಬಿಕೆ,ಐತಿಹಾಸಿಕ ನಡವಳಿಕೆಗಳೊಂದಿಗೆ ತುಲನೆ ಮಾಡಿದಾಗ ಜೈನ ಸಂಸ್ಕೃತಿಯಷ್ಟು ಹೆಗ್ಗಳಿಕೆ ಹೊಂದಿರುವ ಧರ್ಮ ಬೇರೊಂದಿಲ್ಲ ಎಂದರು. ವಲಯ 8ರ ಉಪಾಧ್ಯಕ್ಷ ಸುದರ್ಶನ್ ಜೈನ್, ವಿಭಾಗ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ ವಲಯ ಮತ್ತು ವಿಭಾಗಗಳ ಮಾಹಿತಿ ನೀಡಿದರು.
ಇತ್ತೀಚೆಗೆ ನಿಧನರಾದ ಪ್ರಭಾಚಂದ್ರ ಜೈನ್ ಅವರಿಗೆ ಮೌನ ಪ್ರಾರ್ಥನೆಯ ಮೂಲಕ ಶೃದ್ದಾಂಜಲಿ ಅರ್ಪಿಸಲಾಯಿತು. ಇದೇವೇಳೆ ಬಂಟ್ವಾಳ ಪ್ರೇರಣ ಸ್ವಸಹಾಯ ಸಂಘದ ಸದಸ್ಯರು ಆಯೋಜಿಸಿದ್ದ ವನಮಹೋತ್ಸವದ ಪ್ರಯುಕ್ತ ಸಸಿಗಳನ್ನು ಪುರೋಹಿತರಾದ ಪುಷ್ಪರಾಜ್ ಇಂದ್ರ ಇವರಿಗೆ ಗಿಡ ಹಸ್ತಾಂತರಿಸುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಕೋಶಾಧಿಕಾರಿ ಅಜಿತ್ ಕುಮಾರ್ ಹಾಜರಿದ್ದರು. ಕಾರ್ಯದರ್ಶಿ ಜಯಕೀರ್ತಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.
