ಕುಪ್ಪೆಪದವು: ಎಡಪದವು -ಕುಪ್ಪೆಪದವು ರಸ್ತೆಯ ನೆಲ್ಲಿಜೋರ ಮಾಣಿಪಲ್ಲ ಪರಿಸರದಲ್ಲಿ ಸ್ಥಳೀಯರು ರಸ್ತೆ ಬದಿ ಚೆಲ್ಲಿದ್ದ ಕಸದಲ್ಲಿ ಆಹಾರ ಕೆದಕುತ್ತಿದ್ದಾಗ ದೊಡ್ಡ ಗಾತ್ರದ ಪ್ಲಾಸ್ಟಿಕ್ ಬಾಟಲಿಯೊಳಗೆ ಇದ್ದ ಆಹಾರವನ್ನು ತಿನ್ನುವ ಉದ್ದೇಶದಿಂದ ಬಾಟಲಿಯೊಳಗೆ ಮೂತಿ ತೂರಿಸಿದ ಬೀದಿ ನಾಯಿಯ ಮೂತಿ ಪ್ಲಾಸ್ಟಿಕ್ ಬಾಟಲಿಯಲ್ಲಿ ಸಿಲುಕಿ ಹೊರಬರಲಾಗದೆ, ಆಹಾರ ತಿನ್ನಲಾಗದೆ ಕಳೆದ ಹತ್ತು ದಿನಗಳಿಂದ ಒದ್ದಾಟ ನಡೆಸುತ್ತಿತ್ತು.
ಆಹಾರ ತಿನ್ನಲು ಸಾಧ್ಯವಾಗದೆ ಪರದಾಡುತ್ತಿದ್ದ ನಾಯಿಗೆ ಬಾಟಲಿಯಿಂದ ಮುಕ್ತಿ ನೀಡುವ ಮೂಲಕ ಕುಪ್ಪೆಪದವಿನ ಮೆಸ್ಕಾಂ ಸಿಬಂದಿ ಯಾದವ ಬಳ್ಳಿ ಮತ್ತು ರಿಕ್ಷಾ ಚಾಲಕ ಲಕ್ಷ್ಮಣ ರಾಮಡ್ಕ ಮಾನವೀಯತೆ ಮೆರೆದಿದ್ದಾರೆ.
ಕಳೆದ ಹತ್ತು ದಿನಗಳ ಹಿಂದೆ ನಾಯಿ ಮೂತಿಗೆ ಬಾಟಲಿ ಸಿಕ್ಕಿ ಹಾಕಿಕೊಂಡು ಓಡಾಡುತಿತ್ತು. ಆಹಾರ ತಿನ್ನಲು ಸಾಧ್ಯವಾಗದೆ ಒದ್ದಾಡುತ್ತಿತ್ತು.ಇದನ್ನು ಕಂಡ ಕುಪ್ಪೆಪದವಿನ ಹಲವು ಪ್ರಾಣಿ ಪ್ರೇಮಿಗಳು ನಾಯಿ ಗೆ ಬಾಟಲಿಯಿಂದ ಮುಕ್ತಿ ನೀಡಲು ಕಳೆದ ಒಂಬತ್ತು ದಿನಗಳಿಂದ ಸತತವಾಗಿ ಪ್ರಯತ್ನಿಸಿದ್ದು ಸಫಲರಾಗಿರಲಿಲ್ಲ. ಬಾಟಲಿ ಸಿಕ್ಕಿಹಾಕಿಕೊಂಡ ಪರಿಣಾಮ ನಾಯಿಗೆ ಆಹಾರ ತಿನ್ನಲು ಸಾಧ್ಯವಾಗಿರಲಿಲ್ಲ.ಈ ವಿಷಯವನ್ನು ಕುಪ್ಪೆಪದವು ಗ್ರಾಮಪಂಚಾಯತ್ ನ ಗಮನಕ್ಕೆ ತಂದಿದ್ದರೂ ಕೂಡ ಮೂಕ ಪ್ರಾಣಿಯ ರೋದನೆ ಪಂಚಾಯತ್ ಆಡಳಿತದ ಕಲ್ಲು ಹೃದಯಕ್ಕೆ ಅರ್ಥವಾಗಿರಲಿಲ್ಲ.ಇನ್ನೊಂದೆರಡು ದಿನ ಕಳೆದಿದ್ದರೆ ನಾಯಿ ಸಾಯುವ ಸಂಭವವಿತ್ತು. ಇದೀಗ ನಾಯಿಯನ್ನು ಹಿಡಿದು ಪ್ಲಾಸ್ಟಿಕ್ ಬಾಟಲಿ ತೆಗೆದು ಅದಕ್ಕೆ ಮರುಜೀವ ಒದಗಿಸಿದ ಇಬ್ಬರು ಪ್ರಾಣಿಪ್ರಿಯರ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

