ಆಧುನಿಕ ಯಾಂತ್ರಿಕ ಕಾಲಘಟ್ಟದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ವ್ಯವಹಾರ-ವಹಿವಾಟುಗಳಲ್ಲಿ ಬ್ಯುಸಿಯಾಗಿರುತ್ತಾರೆ. ವಸ್ತುಸ್ಥಿತಿ ಹೀಗಿರುವಾಗ ಪರಿಸರದ ಮೇಲಿನ ನಮ್ಮ ಕಾಳಜಿ ಕೈ ತಪ್ಪಿಹೋಗಿ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪರಿಸರದಿಂದಾಗುವ ವ್ಯತಿರಿಕ್ತ ಪರಿಣಾಮವನ್ನು ನಾವೇ ಎದುರಿಸುವಂತಾಗಿದೆ ಎಂದರೆ ಅಚ್ಚರಿಪಡಬೇಕಾಗಿಲ್ಲ. ಇಂತಹ ವೈರುದ್ಧ್ಯ ಸನ್ನಿವೇಶದಲ್ಲೂ ನಮ್ಮಲ್ಲೊಬ್ಬರು ಪರಿಸರ ಪ್ರೇಮಿ ಅಥವಾ ಪ್ರಕೃತಿ ಆರಾಧಕರಿದ್ದಾರೆಂದರೆ ಅವರು ಸಹಜವಾಗಿಯೇ ಎಲ್ಲೆಡೆ ಶ್ಲಾಘನೆಗೆ ಪಾತ್ರರಾಗುತ್ತಾರೆ. ಮಂಗಳೂರಿನ ಕೊಲ್ಯ ಕನೀರುತೋಟದತ್ತ ಸಾಗಿದರೆ ಖಂಡಿತವಾಗಿಯೂ ಅಂತಹ ಪ್ರಕೃತಿ ಆರಾಧಕರೊಬ್ಬರ ಮನೆಯೊಂದು ಗೋಚರವಾಗುತ್ತದೆ.
ಬರೇ ಏಳು ಸೆಂಟ್ಸ್ನ ಮನೆ ಆವರಣದಲ್ಲಿ ಎಲ್ಲಿ ನೋಡಿದರಲ್ಲಿ ಅಪೂರ್ವ ಪರಿಮಳ ಬೀರುವ ಹೂ-ಬಳ್ಳಿ-ಗಿಡಗಳು, ಫಲ ಕೊಡುವ ಗಿಡ ಮರಗಳು ನಳನಳಿಸುತ್ತಿವೆ. ಮನೆಯ ಒಂದಿoಚೂ ಜಾಗ ಬಿಡದೆ ಕುಂಡಗಳಲ್ಲಿ ಬೆಳೆದಿರುವ ನಾನಾ ಜಾತಿಯ ಹೂಗಿಡಗಳು ಮತ್ತು ಅದರಲ್ಲಿ ಅರಳಿರುವ ಕೆಂಪು, ಕೇಸರಿ, ಬಿಳಿ, ನೀಲಿ, ಹಳದಿ ಬಣ್ಣಗಳ ಹೂವುಗಳು ನೋಡುಗರಿಗೆ ಮುದ ನೀಡುತ್ತವೆ.
ಗುಲಾಬಿ, ನೆಲಗುಲಾಬಿ, ಬೋನ್ಸಾಯಿ ಗಿಡಗಳು, ವಿಶಿಷ್ಟ ದಾಸವಾಳ, ತಾವರೆ, ಮಲ್ಲಿಗೆ, ವಿವಿಧ ಬಗೆಯ ಬಳ್ಳಿಗಳಲ್ಲಿ ಬಣ್ಣಬಣ್ಣದ ಪುಟ್ಟಪುಟ್ಟ ಹೂವುಗಳು, ಕಂಬಗಳಲ್ಲಿ ಸುತ್ತಿಕೊಂಡಿರುವ ಎಲೆಬಳ್ಳಿಗಳು…ಹೀಗೆ ಎಲ್ಲವೂ ಸುಂದರ, ಅಷ್ಟೇ ಆಪ್ಯಾಯಮಾನವಾಗಿದ್ದು, ನೋಡುಗರಿಗೆ ಎಲ್ಲೋ ಉದ್ಯಾನವೊಂದರಲ್ಲಿದ್ದೇವೋ ಎಂದನಿಸಬಹುದು. ನಿರುಪಯೋಗಿ ಪ್ಲಾಸ್ಟಿಕ್ ಬಾಟಲಿಗಳ ಮೇಲ್ಭಾಗ ತುಂಡರಿಸಿ, ಅದರೊಳಗೆ ಸಣ್ಣ ಪ್ರಮಾಣದಲ್ಲಿ ಮಣ್ಣು ಹಾಕಿ ಕೆಲವು ಎಲೆ-ಬಳ್ಳಿಗಳನ್ನು ಬೆಳೆಸಲಾಗಿದೆ. ಹೀಗೆ ಇಲ್ಲಿ ಸುಮಾರು ೧೫೦ ಜಾತಿಯ ಹೂಗಿಡಗಳು ಇದ್ದು, ಒಂದೂಂದು ಪ್ರತ್ಯೇಕ ಬಣ್ಣ ಹಾಗೂ ಪರಿಮಳ ಬೀರುತ್ತಿವೆ.
ಇನ್ನು ಇಲ್ಲಿರುವ ಆಯುರ್ವೇದ ಗಿಡ-ಬಳ್ಳಿ, ಎಲೆಗಳ ಬಗ್ಗೆ ಒಂದಿಷ್ಟು ಹೇಳಲೇ ಬೇಕಾಗುತ್ತದೆ. ಒಂದೆಲಗ(ತಿಮರೆ), ಲಿಂಬೆಹಣ್ಣು, ಲಕ್ಷ್ಮಣ ಫಲದೊಂದಿಗೆ ಫರಂಗಿಹಣ್ಣು, ದ್ರಾಕ್ಷಿ, ಪೇರಳೆ, ಮಾವು, ಕಿತ್ತಾಳೆ ಗಿಡಗಳಿವೆ. ಅಲ್ಲದೆ ಹಲಸಂಡೆ ,ಬೆಂಡೆ, ಸೋರೆಕಾಯಿ ಮುಂತಾದ ತರಾಕಾರಿಯನ್ನು ಬೆಳೆಸುತ್ತೇನೆ. ಇವುಗಳಲ್ಲಿ ಲಕ್ಷ್ಮಣ ಫಲಕ್ಕೆ ಭಾರೀ ಬೇಡಿಕೆ ಇದೆ. ಕ್ಯಾನ್ಸರ್ ಪೀಡಿತರಿಗೆ ಈ ಫಲ ರಾಮಬಾಣ ಎಂದೂ ಹೇಳಲಾಗುತ್ತಿದ್ದು, ಹಲವರಿಗೆ ಕ್ಯಾನ್ಸರ್ ಪೀಡಿತರಿಗೆ ಈ ಫಲವನ್ನು ನೀಡಿದ್ದೇವೆ. 
ಕೊಲ್ಯ ಕನೀರುತೋಟದ ವಿಜಯಲಕ್ಷ್ಮಿಅವರ ಪತಿ ತೇಜ್ ಪಾಲ್ ಮತ್ತು ಮಕ್ಕಳು ಕೈತೋಟ, ಉದ್ಯಾನ ಬೆಳೆಸಿದ್ದಾರೆ. ಪ್ರಕೃತಿಯೇ ಮೈದಾಳಿದ ಈ ನಿಸರ್ಗದತ್ತ ಸುಂದರ ಮನೆಯ ಮಾಹಿತಿ ಈಗ ಎಲ್ಲೆಡೆ ಪ್ರಚಾರದಲ್ಲಿದ್ದು, ಹಲವು ಪರಿಸರ-ಉದ್ಯಾನವನ್ನು ನೋಡಲು ಪ್ರೇಮಿಗಳು ಭೇಟಿ ನೀಡಿ ಮನೆಯವರ ಶ್ರಮಕ್ಕೆ ಅತೀವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನುತ್ತಾರೆ ವಿಜಯಲಕ್ಷ್ಮೀ ಅವರ ತಂಗಿ ಪ್ರಪುಲ್ಲಾ ಮೋಹನ್ .
“ಮನೆ ಪರಿಸರ ಸುಂದರವಾಗಿರಬೇಕಿದ್ದರೆ ನಾವು ಒಂದಷ್ಟು ತ್ಯಾಗ ಮಾಡಬೇಕಾಗುತ್ತದೆ. ನಮ್ಮ ಪರಿಸರ ಸುಂದರವಾಗಿದ್ದರೆ, ಅದನ್ನು ನೋಡುವ ಇತರರು ಒಂದಷ್ಟು ಕಲಿತುಕೊಳ್ಳುತ್ತಾರೆ. ಎಲ್ಲಿಯಾದರೂ ಹೊಸ ಜಾತಿ ಹೂವಿನ ಗಿಡ ಕಂಡಾಗ ಅದು ನಮ್ಮ ಮನೆಯಲ್ಲಿ ಬೆಳೆಯಬೇಕೆಂಬ ಆಸೆ ಇಟ್ಟುಕೊಂಡವಳು ನಾನು. ನಮ್ಮ ಮನೆಯು ಒಂದು ಸುಂದರ ಉದ್ಯಾನದಂತಾಗಲು ನಮ್ಮ ಆಸಕ್ತಿಯೇ ಕಾರಣವಾಗಿದೆ. ಬೇರೆಬೇರೆ ಕಡೆಗಳಿಂದ ವಿಶಿಷ್ಟ ಹೂ, ಬಳ್ಳಿ, ಫಲಗಳ ಗಿಡ ತಂದು ನೆಡುತ್ತೇವೆ.
ಅದಕ್ಕಾಗಿ ಒಂದಷ್ಟು ಖರ್ಚೂ ಮಾಡುತ್ತೇವೆ. ಗಿಡಗಳಿಗೆ ಕೀಟಗಳಿಂದ ಹಾನಿಯಾಗದಂತೆ ಕೀಟನಾಶಕ ಸಿಂಪಡಿಸುತ್ತೇವೆ. ಬೇಸಗೆಯಲ್ಲಿ ಕೆಲವು ಗಿಡಗಳು ಸಹಜವಾಗಿಯೇ ಸೊರಗಿದರೂ, ಅವಗಳನ್ನು ಆದಷ್ಟು ಮಟ್ಟಿಗೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಆರಂಭದಲ್ಲಿ ಇದೊಂದು ಹವ್ಯಾಸವಾಗಿತ್ತು. ಈಗ ಮನೆಯ ಪ್ರತಿಯೊಬ್ಬರಿಗೂ ಉದ್ಯಾನ ಮೇಲಿನ ಕಾಳಜಿ ಹೆಚ್ಚಾಗಿದೆ. ಇದರಿಂದ ಮನೆಯೊಳಗಿನ ಪರಿಸರವೂ ಉತ್ತಮವಾಗಿದೆ” ಇಷ್ಟೆಲ್ಲಾ ಮಾಡಲು ನನ್ನ ಪತಿ ಹಾಗೂ ಮಕ್ಕಳ ಪ್ರೋತ್ಸಹ ನನಗಿದೆ ಎಂದು ಮನೆ ಮಾಲಕಿ ವಿಜಯಲಕ್ಷ್ಮಿ ತೇಜ್ ಪಾಲ್ ಹೇಳುತ್ತಾರೆ.
