ಬಂಟ್ವಾಳ : ಸೀಲ್ಡೌನ್ನಿಂದಾಗಿ ನರಿಕೊಂಬು ಗ್ರಾಮದ ನಾಯಿಲ ಪ್ರದೇಶದ ಸುಮಾರು ೧೨೦ ಮನೆಗಳ ನಿವಾಸಿಗಳ ಬದುಕು ಸಂಕಷ್ಟಕ್ಕೀಡಾಗಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳ ಮನೆ ತೆರಿಗೆ, ವಿದ್ಯುತ್ ಬಿಲ್, ನೀರಿನ ಬಿಲ್ಲನ್ನು ಮನ್ನಾ ಮಾಡುವಂತೆ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ನಿಯೋಗ ಬಂಟ್ವಾಳ ತಾ.ಪಂ.ಇಒ ರಾಜಣ್ಣ ಅವರಿಗೆ ಮನವಿ ಮಾಡಿದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ಕುಮಾರ್ ಶೆಟ್ಟಿ ಅವರ ನೇತೃತ್ವದ ನಿಯೋಗ ಇಒ ಅವರನ್ನು ಭೇಟಿಯಾಗಿ ಕೊರೊನಾ ಸೋಂಕಿನ ಪ್ರಕರಣದಿಂದ ಈ ಪ್ರದೇಶವನ್ನು ಸೀಲ್ಡೌನ್ ಪ್ರದೇಶವೆಂದು ಘೋಷಿಸಲಾಗಿದ್ದು, ಸುಮಾರು ೧೨೦ ಮನೆಗಳ ಜನರಿಗೆ ಯಾವುದೇ ಮೂಲಭೂತ ಸೌಲಭ್ಯ ದೊರೆತಿಲ್ಲ. ಇದರಿಂದಾಗಿ ಇಲ್ಲಿಯ ಜನರಿಗೆ ದಿನ ನಿತ್ಯದ ಬದುಕು ನಿರ್ವಹಣೆ ಕಷ್ಟವಾಗಿದೆ.ಹೀಗಾಗಿ ಇಲ್ಲಿನ ನಿವಾಸಿಗಳ ನೀರಿನ ಬಿಲ್, ಮನೆ ತೆರಿಗೆ, ವಿದ್ಯುತ್ ಬಿಲ್ ಮನ್ನಾ ಮಾಡುವ ಮುಖಾಂತರ ಅವರ ಸಂಕಷ್ಟಗಳಿಗೆ ಸ್ಪಂದಿಸಬೇಕಿದೆ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ನರಿಕೊಂಬು ವಲಯ ಅಧ್ಯಕ್ಷ ಮಾದವ ಕರ್ಬೆಟ್ಟು, ಆಲ್ಬರ್ಟ್ ಮಿನೇಜಸ್, ಗ್ರಾ.ಪಂ.ಸದಸ್ಯರಾದ ರವೀಂದ್ರ ಸಪಲ್ಯ, ಕೃಷ್ಣಪ್ಪ ನಾಟಿ, ಅರುಣ್ ಶೆಟ್ಟಿ ಅವರು ನಿಯೋಗದಲ್ಲಿದ್ದರು.
