ಕೈಕಂಬ: ಗಂಜಿಮಠದಲ್ಲಿ ಗುರುವಾರ ನಡೆಯುತ್ತಿದ್ದ ವಾರದ ಸಂತೆಯನ್ನು ಪೊಲೀಸರು ಮತ್ತು ಅಧಿಕಾರಿಗಳು ನಿನ್ನೆ ಬಂದ್ ಮಾಡಿದ್ದಾರೆ. ನಿನ್ನೆ ಗುರುವಾರವಾದ ಕಾರಣ ವ್ಯಾಪಾರಿಗಳು ಎಂದಿನಂತೆ ಸಂತೆಗೆ ಬಂದು ತಮ್ಮ ಮಳಿಗೆಗಳನ್ನು ತೆರೆದಿದ್ದರು ಅಲ್ಲದೆ ಗ್ರಾಹಕರೂ ಕೂಡ ಸಂತೆಗೆ ಆಗಮಿಸಿದ್ದರು.
ನೊವೆಲ್ ಕೊರೊನ ವೈರಸ್ ಹರಡುವುದನ್ನು ತಡೆಯುವ ಕ್ರಮವಾಗಿ, ಜನ ಸೇರುವ ಎಲ್ಲಾ ಕಾರ್ಯಕ್ರಮಗಳನ್ನು ನಿಷೇಧಿಸಿ ಸರಕಾರ ಕಟ್ಟುನಿಟ್ಟಿನ ಆದೇಶ ನೀಡಿದ್ದರೂ, ಗಂಜಿಮಠದಲ್ಲಿ ವಾರದ ಸಂತೆ ನಡೆಯುತ್ತಿರುವ ಬಗ್ಗೆ ಬಜಪೆ ಪೊಲೀಸರಿಗೆ ಮತ್ತು ಗುರುಪುರ ಉಪತಹಶೀಲ್ದಾರರಿಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಯಲ್ಲಿ, ತಕ್ಷಣ ಕಾರ್ಯಪ್ರವೃತ್ತರಾದ ಉಪತಹಶೀಲ್ದಾರ್ ಮತ್ತು ಪೊಲೀಸರು ಗಂಜಿಮಠಕ್ಕೆ ಧಾವಿಸಿ ಬಂದು ಸಂತೆಗೆಬಂದಿದ್ದ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಮನವರಿಕೆ ಮಾಡಿ ಸಂತೆಯನ್ನು ತೆರವುಗೊಳಿಸುವಂತೆ ಸೂಚಿಸಿದರು.
ಸಂತೆ ನಡೆಸುವಂತಿಲ್ಲ ಎಂದು ಮೊದಲೇ ಮಾಹಿತಿ ನೀಡುತ್ತಿದ್ದರೆ ನಮಗೆ ಇಲ್ಲಿಗೆ ಬಂದು ವಾಪಾಸ್ ಹೋಗುವ ಸಮಯ ಮತ್ತು ಖರ್ಚು ಆದರೂ ಉಳಿಯುತ್ತಿತ್ತು, ಗ್ರಾಮಪಂಚಾಯತ್ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ದೂರದಿಂದ ಬಂದಿದ್ದ ವ್ಯಾಪಾರಿಗಳು ಗೊಣಗುತ್ತಾ ಜಾಗ ಖಾಲಿ ಮಾಡಿದರು.
ನಿರ್ಲಕ್ಷಿಸಿತೇ ಪಂಚಾಯತ್ :
ರಾಜ್ಯಾದ್ಯಂತ ಕಟ್ಟುನಿಟ್ಟಿನ ಕ್ರಮ ಜಾರಿಯಾಗಿದ್ದರೂ, ನಮಗೆ ಸಂತೆ ನಿಷೇಧಿಸುವಂತೆ ಆದೇಶ ಬಂದಿಲ್ಲ ಎಂದು ಸುಮ್ಮನಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಅರಿಯದೆ ಪಂಚಾಯತ್ ನಿರ್ಲಕ್ಷ್ಯ ಮಾಡಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ. ಈ ಬಗ್ಗೆ ದೂರು ಬಂದ ತಕ್ಷಣ ಕ್ರಮಕೈಗೊಂಡ ಉಪತಹಶೀಲ್ದಾರ್ ಹಾಗೂ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ವಾರದ ಸಂತೆಗಳನ್ನು ನಿಷೇಧಿಸುವುದು ಪಂಚಾಯತ್ ಗೆ ಸೇರಿದ್ದಾಗಿತ್ತು, ಜಿಲ್ಲಾಧಿಕಾರಿಗಳ ಆದೇಶ ಮತ್ತು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಪಂಚಾಯತ್ ಮತ್ತು ಪೊಲೀಸರ ಜತೆ ಚರ್ಚಿಸಿ, ಹೆಚ್ಚು ಜನ ಸೇರದಂತೆ ನೋಡಿಕೊಳ್ಳುವ ಉದ್ದೇಶದಿಂದ ಗಂಜಿಮಠದ ವಾರದ ಸಂತೆಯನ್ನು ಮುಂದಿನ ಆದೇಶವರೆಗೆ ನಿಷೇಧಿಸಲಾಗಿದೆ.
