ಬಂಟ್ವಾಳ: ಸರಿಸುಮಾರು ಎರಡು ವರ್ಷಗಳಿಂದ ಖಾಲಿಯಾಗಿದ್ದ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹುದ್ದೆಗೆ ನಿರೀಕ್ಷೆಯಂತೆ ಬಿಜೆಪಿಯ ಹಿರಿಯ ನೇತಾರ ಬಿ.ದೇವದಾಸ ಶೆಟ್ಟಿ ಬಂಟ್ವಾಳ ಅವರನ್ನು ನೇಮಕಗೊಳಿಸಿ ಸರಕಾರ ಬುಧವಾರ ಆದೇಶ ಹೊರಡಿಸಿದೆ.
ಜೊತೆಗೆ ಪ್ರಾಧಿಕಾರಕ್ಕೆ ಮಾಜಿ ಪುರಸಭಾ ಸದಸ್ಯ ಭಾಸ್ಕರಕುಲಾಲ್ ಕಾಮಾಜೆ,ಎಂ.ಕೆ.ಸಚಿನ್ ಮೆಲ್ಕಾರ್,ಎ.ರಾಮಪ್ರಸಾದ್ ಬಂಟ್ವಾಳ ಅವರನ್ನು ನೂತನ ನಿರ್ದೇಶಕರನ್ನಾಗಿ ನಿಯುಕ್ತಿಗೊಳಿಸಿ ಆದೇಶಿಸಲಾಗಿದ್ದು, ಮುಂದಿನ ಮೂರುವರ್ಷದ ಅವಧಿಗೆ ದೇವದಾಸ ಶೆಟ್ಟಿ ಅಧ್ಯಕ್ಷತೆಯ ಈ ನೂತನ ಸಮಿತಿ ಕಾರ್ಯ ನಿರ್ವಹಿಸಲಿದೆ. ಕಳೆದೆರಡು ವರ್ಷದಿಂದ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರಕ್ಕೆ( ಬೂಡಾ) ಅಧ್ಯಕ್ಷರ ಮತ್ತು ಸಮಿತಿಯಿಲ್ಲದೆ ಅಗತ್ಯ ಕೆಲಸಕ್ಕಾಗಿ ಇಲ್ಲಿಗಾಗಮಿಸುವ ಪುರವಾಸಿಗಳು ತೊಂದರೆ ಅನುಭವಿಸಿದ್ದರು. ಬಂಟ್ವಾಳ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಮತ್ತು 10 ವರ್ಷಗಳ ಕಾಲ ಬಂಟ್ವಾಳ ಪುರಸಭಾಸದಸ್ಯರಾಗಿ ಅನುಭವವಿರುವ ನೂತನ ಅಧ್ಯಕ್ಷ ದೇವದಾಸ ಶೆಟ್ಟಿ ಅವರಿಗೆ ನ.ಯೋ.ಪ್ರಾ.ದಿಂದ ಜನಸಾಮಾನ್ಯರಿಗೆ ಕೆಲವೊಂದು ಕಾನೂನು ತೊಡಕಿನಿಂದಾಗುವ ಸಮಸ್ಯೆಯ ಸಂಪೂರ್ಣ ಅರಿವನ್ನು ಹೊಂದಿದ್ದು,ಆರ್ಹವಾಗಿಯೇ ಅವರಿಗೆ ಈ ಹುದ್ದೆ ಒಲಿದುಬಂದಿದೆ.
