ವಾಮಂಜೂರು : ಹಿಂದೆ ರಾಜರು ನಾಡಿಗೆ ಒಳ್ಳೆಯದಾಗಲೆಂದು ಅಶ್ವಮೇಧ, ರಾಜಸೂಯ ಯಾಗ ಮಾಡುತ್ತಿದ್ದರು. ಈಗ ಪ್ರಜೆಗಳೇ ಈ ಕಾರ್ಯ ಮಾಡುತ್ತಾರೆ. ನಾಗಮಂಡಲದಿಂದ ನಾಡಿಗೆ ಮಂಗಳವಾಗುತ್ತದೆ ಎಂಬ ನಂಬಿಕೆ ಇದೆ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮಿ ಹೇಳಿದರು.
ನವೀನ್ಚಂದ್ರ ಆಳ್ವರ ಯಜಮಾನಿಕೆಯಲ್ಲಿ ವಾಮಂಜೂರು ತಿರುವೈಲುಗುತ್ತಿನಲ್ಲಿ ತಿರುವೈಲುಗುತ್ತು ಕುಟುಂಬಿಕರು ನಡೆಸಿಕೊಟ್ಟ ಅಷ್ಟಪವಿತ್ರ ನಾಗಮಂಡಲೋತ್ಸವದ ಸಂದರ್ಭದಲ್ಲಿ ಆಯೋಜಿಸಲಾದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಮಾತನಾಡಿ, `ನಾನು’ ಎಂಬುದನ್ನು ಹೋಗಲಾಡಿಸುವ ಶಕ್ತಿ ಇರುವುದು ಆರಾಧನೆಗೆ ಮಾತ್ರ. `ಅಹಂ’ ಬಿಟ್ಟು ತಾಯಿಯಿಂದ ಹಿಡಿದು ನಾಡಿನವರೆಗೆ ಸಕಲ ಜೀವಾತ್ಮಗಳಿಗೆ ಗೌರವ ನೀಡುವ ಗುಣ ಬೆಳೆಸಿಕೊಳ್ಳಿ ಎಂದರು.ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿ ಮಾತನಾಡಿ, ರೋಗರುಜಿನ ನಿವಾರಣೆ, ಆರೋಗ್ಯ ಭಾಗ್ಯ ಕಾಪಾಡುವ ನಿಟ್ಟಿನಲ್ಲಿ ನಾಗಾರಾಧನೆ ಮುಖ್ಯವಾಗುತ್ತದೆ.
ಇಂತಹ ಆಧ್ಯಾತ್ಮಿಕ ಕೆಲಸಗಳಿಂದ ಜೀವನ ಪಾವನವಾಗುವುದು. ಧಾರ್ಮಿಕ ಪ್ರಪಂಚ ಗಟ್ಟಿಯಾಗಿದ್ದರೆ ಮಾತ್ರ ಸಂಸ್ಕøತಿ ಉತ್ತಮವಾಗಿರುತ್ತದೆ ಎಂದರು.ವಿದ್ವಾನ್ ಪಂಜ ಭಾಸ್ಕರ ಭಟ್ ಧಾರ್ಮಿಕ ಉಪನ್ಯಾಸಗೈಯುತ್ತ, ನಾಗಾರಾಧನೆಗೂ ಕಂಬಳಕ್ಕೂ ಪ್ರಾಚೀನವಾದ ವಿಶೇಷ ನಂಟಿದೆ. ಈ ಕ್ಷೇತ್ರದಲ್ಲಿ ನಡೆಯುತ್ತಿರುವ ನಾಗಮಂಡಲ ಇದಕ್ಕೆ ಸಾಕ್ಷ್ಯಿಯಾಗಿದೆ. ನಾಗಮಂಡಲವೆಂದರೆ ಎಲ್ಲ ದೃಷ್ಟಿಯಿಂದಲೂ ಪ್ರಕೃತಿಯ ಆರಾಧನೆಯಾಗಿದೆ ಎಂದರು.
ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ ಹಿಂದೂಗಳು ಶಾಂತಿಪ್ರಿಯರಾಗಿದ್ದು, ಎಲ್ಲರೊಂದಿಗೆ ಆತ್ಮೀಯತೆ ಬೆಳೆಸಿಕೊಂಡವರು. ಈಗ ಜಾತಿ ಕಲಹದಂತಹ ಕೆಲವು ವಿಷಮ ಸನ್ನಿವೇಶ ಹುಟ್ಟುಹಾಕಲಾಗುತ್ತಿದೆ. ಯುವಪೀಳಿಗೆ ಸಹಿತ ಎಲ್ಲರೂ ಭವಿಷ್ಯದ ಭಾರತ ಕಟ್ಟುವ ಬಗ್ಗೆ ಯೋಚಿಸಬೇಕು ಎಂದರು.ಮಾಜಿ ಸಚಿವ ರಮಾನಾಥ ರೈ, ಬಂಟರ ಯಾನೆ ನಾಡವರ ಮಾತೃ ಸಂಘ(ರಿ) ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮತ್ತಿತರರು ಮಾತನಾಡಿದರು.
ಅಭಯಚಂದ್ರ ಜೈನ್, ಶಕುಂತಲಾ ಶೆಟ್ಟಿ, ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ರಮಾನಂದ ಹೆಗ್ಡೆ, ನಿತ್ಯಾನಂದ ಮುಂಡೋಡಿ, ಚಂದ್ರಹಾಸ ಶೆಟ್ಟಿ ವಾಮಂಜೂರು, ಮಿಥುನ್ ರೈ, ಗಣೇಶ್ ಶೆಟ್ಟಿ ಜಪ್ಪು, ಗುರ್ಮೆ ಸುರೇಶ್ ಶೆಟ್ಟಿ, ಜಗದೀಶ ಶೇಣವ, ಬಾಲಕೃಷ್ಣ ಕೊಟ್ಟಾರಿ, ರವೀಂದ್ರ ರೈ ಉಳಿದೊಟ್ಟು, ಅಮ್ಮುಂಜೆ ಮಂಜಯ್ಯ ಶೆಟ್ಟಿ, ಮಂಜುನಾಥ ಭಂಡಾರಿ, ಚಿತ್ತರಂಜನ್, ಎರ್ಮಾಳ್ ರೋಹಿತ್ ಹೆಗ್ಡೆ, ಶರಣ್ ಪಂಪ್ವೆಲ್, ಕೃಷ್ಣಮೂರ್ತಿ, ಕಡಂಬೋಡಿ ಮಹಾಬಲ ಪೂಜಾರಿ, ಪ್ರೊ. ಎಂ ಬಿ ಪುರಾಣಿಕ್, ಸುಕುಮಾರ್ ಶೆಟ್ಟಿ, ಭಾಸ್ಕರ್ ಕೋಟ್ಯಾನ್, ಪಿ ಆರ್ ಶೆಟ್ಟಿ, ಸುರೇಶ್ಚಂದ್ರ ಶೆಟ್ಟಿ ವೇದಿಕೆಯಲ್ಲಿದ್ದರು.
ತಿರುವೈಲುಗುತ್ತು ರಾಜಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು. ಅಶ್ವಿನ್ ಶೆಟ್ಟಿ ಬೊಂಡಂತಿಲ ಮತ್ತು ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.ರಾತ್ರಿ 10;30ಕ್ಕೆ ಗುಡ್ಡೆಮನೆ ವೇದಮೂರ್ತಿ ಸದಾಶಿವ ಉಪಾಧ್ಯಾಯ ಪೌರೋಹಿತ್ಯದಲ್ಲಿ ಉಡುಪಿ ಸಗ್ರಿ ಗೋಪಾಲಕೃಷ್ಣ ಸಾಮಗರ ನೇತೃತ್ವದಲ್ಲಿ ಮದ್ದೂರು ಕೃಷ್ಣಪ್ರಸಾದ, ಬಾಲಕೃಷ್ಣ ನಟರಾಜ ವೈದ್ಯ ಬಳಗದವರಿಂದ ಅದ್ದೂರಿ ಅಷ್ಟಪವಿತ್ರ ನಾಗಮಂಡಲೋತ್ಸವ ನಡೆಯಿತು. ಬಳಿಕ ಪ್ರಸಾದ ವಿತರಣೆ ನಡೆಯಿತು.


