ವಾಮಂಜೂರು : ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಸುರೇಶ್ ಕುಮಾರ್ ಶನಿವಾರ ಬೆಳಿಗ್ಗೆ ವಾಮಂಜೂರಿನ ಎಸ್ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಅಂಗವಿಕಲರ ಕಲ್ಯಾಣ ಸಂಸ್ಥೆ(ರಿ) ಮಂಗಳೂರು ಇದರ ಕಾರ್ಯದರ್ಶಿ ಪ್ರೊ. ರಾಜೇಂದ್ರ ಶೆಟ್ಟಿ, ಆಡಳಿತ ಮಂಡಳಿಯ ದೇವರಾಜ ಕೆ, ಶಾಲಾ ಆಡಳಿತಾಧಿಕಾರಿ ಗಣೇಶ್ ಭಟ್ ವಿ, ಎಸ್ಡಿಎಂ ಪ್ರೌಢಶಾಲಾ ಮುಖ್ಯ ಶಿಕ್ಷಕ ರಮೇಶ್ ಆಚಾರ್ಯ, ಎಸ್ಡಿಎಂ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಮಾರಿಯೆಟ್ ಮಸ್ಕರೇನಸ್, ಎಸ್ಡಿಎಂ ಐಟಿಐ ಪ್ರಾಂಶುಪಾಲ ನರೇಂದ್ರ, ಪಿಟಿಎ ಅಧ್ಯಕ್ಷೆ ವೇದಾವತಿ, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಹಾಗೂ ವಿಶೇಷ ಸಾಮಥ್ರ್ಯ ವಿದ್ಯಾರ್ಥಿಗಳು ಸಚಿವರನ್ನು ಶಾಲೆಗೆ ಬರ ಮಾಡಿಕೊಂಡರು.ಸಚಿವರೊಂದಿಗೆ ಸ್ಥಳೀಯ ಕಾರ್ಪೊರೇಟರ್ ಸಂಗೀತ ಆರ್ ನಾಯಕ್, ಮಾಜಿ ಮೇಯರ್ ಭಾಸ್ಕರ ಕೆ, ಬಿಜೆಪಿ ಮುಖಂಡರಾದ ಕ್ಯಾ ಗಣೇಶ್ ಕಾರ್ಣಿಕ್, ರಾಜೇಶ್ ಕೊಟ್ಟಾರಿ, ರವೀಂದ್ರ ನಾಯಕ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಲ್ಲೇಸ್ವಾಮಿ, ಶಿಕ್ಷಣಾಧಿಕಾರಿ(ಅಕ್ಷರ ದಾಸೋಹ) ರಾಜಲಕ್ಷ್ಮೀ, ಉದಯ ಕುಮಾರ್ ಕುಡುಪು ಇತ್ತಿತರರು ಇದ್ದರು.
ಶಾಲೆಯಲ್ಲಿ ಬೆಳಿಗ್ಗಿನ ಫಲಾಹಾರ ಮಾಡಿದ ಸಚಿವರು ಬಳಿಕ ಶಾಲೆಯ ಬೋರ್ಡುಗಳು ಮತ್ತು ಗೋಡೆಗಳಲ್ಲಿ ಅಳವಡಿಸಲಾದ ಚಿತ್ರಕಲೆ ಹಾಗೂ ಸುದ್ದಿ ವೀಕ್ಷಿಸಿದರು. ವಿಶೇಷ ಸಾಮಥ್ರ್ಯದ ಮಕ್ಕಳು ನೀಡಿದ ಹೂಗುಚ್ಛ ಸ್ವೀಕರಿಸಿ, ಆತ್ಮೀಯತೆಯಿಂದ ಮಾತುಕತೆ ನಡೆಸಿದರು ಮತ್ತು ಶಾಲಾ ತರಗತಿಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.10ನೇ ತರಗತಿಗೆ ಭೇಟಿ ನೀಡಿದ ಸಚಿವ ಸುರೇಶ್ ಕುಮಾರ್, “ನಿಮಗೆ ಯಾವ ಪಠ್ಯ ಕಠಿಣವೆನ್ನಿಸುತ್ತಿದೆ ?” ಎಂದು ಪ್ರಶ್ನಿಸಿದಾಗ, ವಿದ್ಯಾರ್ಥಿನಿ ನಮ್ರತಾ, “ಗಣಿತ ಮತ್ತು ವಿಜ್ಞಾನದ ಪ್ರಶ್ನೆಗಳನ್ನು `ಟ್ವಿಸ್ಟ್’ ಮಾಡಿ ಕೊಡಲಾಗುತ್ತದೆ” ಎಂದಳು. “ಹಾಗೇನಿಲ್ಲ, ಯಾವುದೇ ಪ್ರಶ್ನೆ ಬಂದರೂ ಒಮ್ಮೆ ಸಮಗ್ರವಾಗಿ ಓದಿ, ಆ ಬಳಿಕ ಭಯ ಬಿಟ್ಟು ಬರೆಯಿರಿ. ಒತ್ತಡ ಬೇಡ. ಎಲ್ಲರೂ ಉತ್ತಮ ಅಂಕ ಗಳಿಸಿ” ಎಂದುತ್ತರಿಸಿ, ಶುಭ ಹಾರೈಸಿದರು. ನಂತರ `ಬ್ಯಾಶ್’ ಕೌಶಲ್ಯ ತರಗತಿ ಹಾಗೂ ಐಟಿಐ ಡಿಪ್ಲೋಮಾ ತರಗತಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು.
“ಮೆಟ್ಟಿಲುಗಳೇ ಇಲ್ಲದ(ಇಲ್ಲಿ ಮೆಟ್ಟಿಲುಗಳ ಬದಲಿಗೆ ರ್ಯಾಂಪ್ ಮಾಡಲಾಗಿದ್ದು, ಈ ಮೂಲಕ ವಿಶೇಷ ಸಾಮಥ್ರ್ಯದ ಮಕ್ಕಳು ವ್ಹೀಲ್ ಚೇರ್ನಲ್ಲಿ ಶಾಲಾ ತರಗತಿಯೊಳಗೆ ಪ್ರವೇಶಿಸುತ್ತಾರೆ) ಈ ಶಾಲೆಯಲ್ಲಿ ವಿಶೇಷ ಸಾಮಥ್ರ್ಯದ ಮಕ್ಕಳ ಜೀವನದ ಮೆಟ್ಟಿಲು ಕಟ್ಟುವ ಕೆಲಸ ಮಾಡುತ್ತಿದೆ” ಎಂದು ಅಭಿಮಾನ ವ್ಯಕ್ತಪಡಿಸಿದ ಸಚಿವರು, ರಾಜ್ಯದ ಇತರ ಕಡೆಯಲ್ಲೂ ಈ ಮಾದರಿಯ ಸಮಗ್ರ ಶಾಲೆ(ಸಾಮಾನ್ಯ ಮಕ್ಕಳೊಂದಿಗೆ ವಿಶೇಷ ಸಾಮಥ್ರ್ಯದ ಮಕ್ಕಳ ಕಲಿಕೆ) ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸಿದರು.



