ಮೂಡುಬಿದಿರೆ:ಇಂದು ಸ್ವಚ್ಛತೆಯ ಬಗ್ಗೆ ಹೆಚ್ಚಿನವರಲ್ಲಿ ಜಾಗೃತಿ ಇದೆ. ಆದರೆ ಊರಿನ ಸ್ವಚ್ಛತೆಯ ಮನೋಭಾವ ಎಲ್ಲರಿಲ್ಲರಬೇಕಾಗಿದೆ. ಸ್ವಚ್ಛತೆ ಮಾಡುವುದು ಕೇವಲ ಶುಚಿಗೊಳಿಸುವ ಕೆಲಸವಲ್ಲ.ಅದು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನ. ಸ್ವಚ್ಛತೆಯಿಂದ ಸಾಮಾಜಿಕ ಜಾಗೃತಿ ಹಾಗೂ ಚಿತ್ತ ಶುದ್ಧಿಯಾಗುತ್ತದೆ ಎಂದು ಸ್ವಚ್ಛ ಮಂಗಳೂರು ಅಭಿಯಾನದ ಸಂಚಾಲಕ, ರಾಮಕೃಷ್ಣ ಮಿಷನ್ನ ಸ್ವಾಮಿ ಏಕಗಮ್ಯಾನಂದ ಮಹಾರಾಜ್ ಹೇಳಿದರು.

ಜವನೆರ್ ಬೆದ್ರ ನೇತೃತ್ವದ ಕ್ಲೀನ್ ಅಪ್ ಮೂಡುಬಿದಿರೆ ಯೋಜನೆಯ ನೂರನೇ ವಾರದ ಕಾರ್ಯಕ್ರಮದಲ್ಲಿ ಭಾನುವಾರ ಭಾಗವಹಿಸಿ, ಸಮಾಜಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಜವನೆರ್ ಬೆದ್ರದ ಸೇವೆಯನ್ನು ಶ್ಲಾಘಿಸಿದರು. ವಿದ್ಯಾಗಿರಿಯಿಂದ ಮೂಡುಬಿದಿರೆ ಸಮಾಜಮಂದಿರವರೆಗೆ ನಡೆದ ಬೃಹತ್ ಜಾಥಾಕ್ಕೆ ಮೂಡುಬಿದಿರೆ ಶ್ರೀ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾಯವರ್ಯ ಸ್ವಾಮೀಜಿ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಚಾಲನೆ ನೀಡಿದರು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅದ್ಯಕ್ಷ ಡಾ.ಎಂ ಮೋಹನ ಆಳ್ವ, ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಯುವರಾಜ್ ಜೈನ್, ಯುಪಿಸಿಎಲ್ ಅದಾನಿ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವ, ಪುರಸಭೆ ಸದಸ್ಯ ರಾಜೇಶ್ ನಾಯ್ಕ್, ಚಿತ್ರನಟ ಸುರೇಶ್ ಅಂಚನ್, ವಕೀಲ ಶಾಂತಿ ಪ್ರಸಾದ್ ಹೆಗ್ಡೆ, ಪುರಸಭೆ ಮುಖ್ಯಾಧಿಕಾರಿ ಇಂದು ಎಂ., ಜವನೆರ್ ಬೆದ್ರ ಸಂಘಟನೆಯ ಸ್ಥಾಪಕ ಅಧ್ಯಕ್ಷ ಅಮರ್ ಕೋಟೆ ಉಪಸ್ಥಿತರಿದ್ದರು.
ಸ್ವಚ್ಛತಾ ಅಭಿಯಾನದಲ್ಲಿ ಸಹಕರಿಸಿದ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ನಿತ್ಯಾನಂದ ಶೆಟ್ಟಿ ಸ್ವಾಗತಿಸಿದರು. ಗಣೇಶ್ ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.
