ಗುರುಪುರ : ಗುರುಪುರ ಗೋಳಿದಡಿ ಗುತ್ತಿನ ಶ್ರೀ ವೈದ್ಯನಾಥ ವೇದಿಕೆಯಲ್ಲಿ ಜ. 19ರಂದು `ಗುತ್ತಿನ ವರ್ಷದ ಒಡ್ಡೋಲಗ’ ಅರ್ಥಪೂರ್ಣವಾಗಿ ನಡೆಯಿತು.ದೀಪ ಬೆಳಗಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿದ ನಂದಳಿಕೆ ಚಾವಡಿ ಅರಮನೆಯ ಸುಹಾಸ್ ಹೆಗ್ಡೆ ಮಾತನಾಡಿ, ಇಂತಹ ಅರ್ಥಪೂರ್ಣ `ಪರ್ಬೊ’ ಎಲ್ಲ ಗುತ್ತುಗಳಲ್ಲಿ ನಡೆಯಬೇಕು. ಗುತ್ತಿನ ಯಜಮಾನರು ಸಮಾಜ ಮೆಚ್ಚುವ ಸಮತೋಲಿತ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಸಮಾಜದ ಹತ್ತು ಕಣ್ಣುಗಳು ಮತ್ತು ಧರ್ಮದೈವಗಳು ಇವರ ಕೆಲಸ ನೋಡುತ್ತಿರುತ್ತವೆ. ಸಮಾಜವನ್ನು ಒಂದು ನೈಜ ವ್ಯವಸ್ಥೆಯತ್ತ ಕೊಂಡೊಯ್ಯುವಲ್ಲಿ ಗುತ್ತಿನ ಮಣ್ಣಿನ ಶಕ್ತಿ ಕಾರಣೀಭೂತವಾಗಿದೆ ಎಂದರು.
ಸಿಎಸ್ಆರ್ ಎಂಆರ್ಪಿಎಲ್ನ ಮುಖ್ಯ ಪ್ರಬಂಧಕಿ ವೀಣಾ ತಾರನಾಥ ಶೆಟ್ಟಿ ಚೇಳ್ಯಾರುಗುತ್ತು ದಿಕ್ಸೂಚಿ ಭಾಷಣಗೈಯುತ್ತ, ನಮ್ಮ ಜೀವನದಲ್ಲಿ ದಾರಿ ಹುಡುಕಿಕೊಂಡು ಹೋಗುವಾಗ, ದಿಕ್ಕು ಕಾಣುತ್ತದೆ. ದಾರಿ ತಪ್ಪಿದ ಸಂದರ್ಭದಲ್ಲಿ ದೇವರು ನಮ್ಮ `ಗಮ್ಯ’ ಅಥವಾ ನಡೆಯತ್ತ ದಾರಿ ತೋರಿಸುತ್ತಾರೆ. ಈ ಹಂತದಲ್ಲಿ ನಮ್ಮ `ಸಾಧನೆ’ಗೆ ಸಂಸ್ಕಾರ ದಾರಿದೀಪವಾಗುತ್ತದೆ. ಇಲ್ಲಿ ಯಾರೂ `ಕೇವಲ’ ಅಲ್ಲ. ಮನುಷ್ಯನಾಗಿ ಹುಟ್ಟಿದ ಬಳಿಕ ಸುಖ-ಸಾಧನೆ-ಸಾರ್ಥಕತೆಯ ಬದುಕು ಕಟ್ಟುವುದು ಮುಖ್ಯ ಎಂದು ಮಾರ್ಮಿಕವಾಗಿ ನುಡಿದರು.
ಅಧ್ಯಕ್ಷತೆ ವಹಿಸಿದ್ದ ಮೂಡಬಿದ್ರೆ ವಾಲ್ಪಾಡಿಯ ವಾಲ್ಪಾಡಿ ಗುತ್ತಿನ ಗಡಿಕಾರ ರಘುವೀರ ಮುದ್ಯ ಪೂವಣಿಯವರು ಗುತ್ತುಗಳು, ಗಡಿಕಾರರು ಮತ್ತು ಧರ್ಮದೈವಗಳ ಕರ್ತವ್ಯಗಳ ಸೋದಾಹರಣ ಮಾಡಿದರು. ಮೂಡಬಿದ್ರೆ ಮೂಡುಕೊಣಾಜೆ ದೊಡ್ಡಮನೆ ಗಡಿಕಾರ ಕೆ ಸದಾಶಿವ ಹೆಗ್ಗಡೆ, ಕಿನ್ನಿಗೋಳಿ ತಾಳಿಪ್ಪಾಡಿ ಗುತ್ತಿನ ಗಡಿಕಾರ ದಿನೇಶ್ ಭಂಡ್ರಿಯಾಲ್, ಬೆಳ್ಳೂರು ಮಾಡ್ಲಾಯ ದೈವದ ಪಾತ್ರಿ ಚಂದ್ರಶೇಖರ ಅಜಿಲ ಸಂದರ್ಭೋಚಿತವಾಗಿ ಮಾತನಾಡಿದರು.
ವೇದಿಕೆಯಲ್ಲಿ ಕಾರಮೊಗರು ಗುತ್ತಿನ ಭಾಗ್ಯರಾಜ ಆಳ್ವ, ಬೊಳ್ಳುಳ್ಳಿಮಾರು ಗುತ್ತಿನ ಗುರುರಾಜ ಮಾಡ ಉಪಸ್ಥಿತರಿದ್ದರು. ರಂಗ ಕಲಾವಿದ-ನಿರ್ದೇಶಕ ಪರಮಾನಂದ ಸಾಲ್ಯಾನ್ ಪ್ರಸ್ತಾವನೆಗೈದರು. ಗುಡ್ಡೆಗುತ್ತು ಸುನಿಲಾ ಪ್ರಭಾಕರ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರೆ, ಗೋಳಿದಡಿ ಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ವಂದಿಸಿದರು. ಬಳಿಕ ರಂಗ ಸುದರ್ಶನ(ರಿ) ಸಸಿಹಿತ್ಲು ತಂಡದ ಕಲಾವಿದರಿಂದ `ದೇಯಿ’ ಕೋಟಿ ಚೆನ್ನಯ್ಯರ ಮಾತೆಯ ಸಂಗೀತ ರೂಪಕ ಸಾದರಗೊಂಡಿತು.

