ಮಂಗಳೂರು: ನಗರದ ರೈಲು ನಿಲ್ದಾಣದಲ್ಲಿ ಯುವಕನನ್ನು ಬರ್ಬರವಾಗಿ ಕಡಿದು ಕೊಲೆಗೈದ ಘಟನೆ ಗುರುವಾರ ನಸುಕಿನ ಜಾವ ಬೆಳಕಿಗೆ ಬಂದಿದೆ. ಕೊಲೆಗೀಡಾತನನ್ನು ಜಲ್ಲಿಗುಡ್ಡೆ-ಬಜಾಲ್ ಕೋಡಿ ನಿವಾಸಿ ಜಯರಾಜ್ ಅಲಿಯಾಸ್ ಸುಬ್ಬ ಅಲಿಯಾಸ್ ನಾಮ(27) ಎಂದು ಗುರುತಿಸಲಾಗಿದೆ.
ಬುಧವಾರ ತಡರಾತ್ರಿಯಿಂದ ಗುರುವಾರ ನಸುಕಿನ ಒಳಗೆ ಕೃತ್ಯ ನಡೆದಿರಬೇಕೆಂದು ಶಂಕಿಸಲಾಗಿದೆ. ಯುವಕನನ್ನು ರೈಲು ನಿಲ್ದಾಣದಲ್ಲಿ ಅಟಕಾಯಿಸಿದ ತಂಡ ಮಾರಕಾಸ್ತ್ರಗಳಿಂದ ಕಡಿದು ಕೊಲೆಗೈದಿದೆ. ನಸುಕಿನ ಜಾವ ರೈಲು ನಿಲ್ದಾಣದಲ್ಲಿ ಮೃತದೇಹವನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪಾಂಡೇಶ್ವರ ಠಾಣಾ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ವೆನ್ ಲಾಕ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಕೊಲೆಗೀಡಾದ ಯುವಕ ಜಲ್ಲಿಗುಡ್ಡೆಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಎಂದು ತಿಳಿದುಬಂದಿದ್ದು, ಈತ ತಡರಾತ್ರಿಯ ಸಂದರ್ಭ ಇಲ್ಲಿಗೆ ಯಾಕೆ ಬಂದ ಎನ್ನುವುದು ಸಂಶಯಕ್ಕೆಡೆ ಮಾಡಿದೆ. ರೈಲ್ವೇ ಪೊಲೀಸ್ ಮತ್ತು ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


.

