ಉಡುಪಿ: ಜ.17 ಮತ್ತು 18ರಂದು ನಡೆಯುವ ಅದಮಾರು ಪರ್ಯಾಯ ಮಹೋತ್ಸವಕ್ಕೆ ಶ್ರೀಕೃಷ್ಣ ನಗರ ಸಂಪೂರ್ಣ ಸಜ್ಜುಗೊಂಡಿದೆ. ಶ್ರೀಕೃಷ್ಣನ ವೈಭವವನ್ನು ಕಣ್ತುಂಬಿಕೋಳ್ಳಲು ಲಕ್ಷಾಂತರ ಮಂದಿ ಕೃಷ್ಣ ನಗರಿಗೆ ಆಗಮಿಸಲಿದ್ದಾರೆ. ಅದಮಾರು ಮಠದ ಕಿರಿಯ ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು ಶ್ರೀಕೃಷ್ಣನ ಪೂಜೆಗಾಗಿ ನಾಳೆ ಸರ್ವಜ್ಞ ಪೀಠಾರೋಹಣಗೈಯಲಿದ್ದು, ಅಂದು ಮುಂಜಾನೆ ಪೂಜೆಯ ಅಧಿಕಾರವನ್ನು ಅಕ್ಷಯ ಪಾತ್ರೆ, ಸಟ್ಟುಗ, ಗರ್ಭಗುಡಿಯ ಕೀಲಿಕೈ ನೀಡಿ ಸರ್ವಜ್ಞ ಪೀಠದಲ್ಲಿ ಕುಳ್ಳಿರಿಸಿ ಹಸ್ತಾಂತರಿಸಲಾಗುತ್ತದೆ.
ಪರ್ಯಾಯದ ದಿನ ಜೋಡುಕಟ್ಟೆಯಿಂದ ಆರಂಭವಾಗುವ ಮೆರವಣಿಗೆಯನ್ನು ಮೆರುಗುಗೋಳಿಸಲು ಪೂರ್ಣಕುಂಭ ಸ್ವಾಗತ ಕೋರುವ ತಂಡ,ಟ್ಯಾಬ್ಲೋಗಳ ಜತೆಗೆ ವಿವಿಧ ಕಲಾತಂಡಗಳು ಮೆರವಣಿಗೆಯನ್ನು ಮೆರುಗುಗೊಳಿಸಲಿದೆ. ಭಜನ ತಂಡಗಳು, 7 ಚೆಂಡೆ ಬಳಗ,ಬಿರುದಾವಳಿ, 4 ಗೊಂಬೆ ತಂಡಗಳು, 1 ಪಂಚವಾದ್ಯ, 20 ಜನರ ಕೊಂಬು ವಾದನ ತಂಡ, ನಾಗಸ್ವರ ತಂಡ, ದೇವಸ್ಥಾನದ ಪಂಚವಾದ್ಯಗಳು, ಸ್ಯಾಕ್ಸೋಫೋನ್, ಚೆಂಡೆ ಮತ್ತು ಕೋಲಾಟ , ತಮಟೆ, ನಗಾರಿ , ತಾಲೀಮು, ಮರಕಾಲು ಕುಣಿತ, ಭಾರತ ಸೇವಾದಳ, ರೇಂಜರ್-ರೋವರ್ ಸೇರಿ ಹಲವಾರು ಬಗೆಯ ಕಲಾಪ್ರದರ್ಶನ ನಡೆಯಲಿದೆ.
2020ರ ಅದಮಾರು ಪರ್ಯಾಯವನ್ನು ಪರಿಸರ ಸ್ನೇಹಿ ಹಾಗು ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.ಈ ಬಾರಿಯ ಪರ್ಯಾಯದಲ್ಲಿ ಪ್ಲಾಸ್ಟಿಕ್ ಬಳಸದೆ. ಶುಭ ಕೋರಲು ವಸ್ತ್ರದ ಬ್ಯಾನರ್, ಕಟೌಟ್, ಸ್ವಾಗತ ಗೋಪುರಗಳನ್ನು ವಸ್ತ್ರದಿಂದ ನಿರ್ಮಾಣಮಾಡಲಾಗಿದೆ. ಇನ್ನು ನಗರದ ರಸ್ತೆಗಳನ್ನು ಡಾಂಬರೀಕರಣಗೊಳಿಸಲಾಗಿದ್ದು, 400 ಕಂಬಗಳಲ್ಲಿ ಹಾಗು 800 ಗೂಡು ದೀಪಗಳನ್ನು ಹಾಕಲಾಗಿದೆ. ಸ್ವಚ್ಛತೆಗೆ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ನಗರದ ವಿವಿಧೆಡೆ ಇ-ಶೌಚಾಲಯಗಳ ವ್ಯವಸ್ಥೆ ಮಾಡುವ ಮೂಲಕ ಸ್ವಚ್ಚತೆಗೆ ಪ್ರಾಮುಖ್ಯತೆ ನೀಡಿದ್ದಾರೆ.
ಶ್ರೀಕೃಷ್ಣ ಮಠದ ಪರ್ಯಾಯದ ಸಮಯದಲ್ಲಿ ಇನ್ನೊಂದು ಆಕರ್ಷಣೆ ಏನೆಂದರೆ ಅದು ಭೋಜನದ ವ್ಯವಸ್ಥೆ ಹಾಗು ತಿಂಡಿ ತಿನಿಸುಗಳು. ಪಾರ್ಕಿಂಗ್ ಏರಿಯಾ ಬಳಿಯ ಬೈಲಕೆರೆ ಸೇರಿಗಾರ ಕುಟುಂಬಸ್ಥರ ಸುಮಾರು ಒಂದೂವರೆ ಎಕರೆ ಜಾಗದಲ್ಲಿ ಪ್ರಸಾದ ತಯಾರಿ ಮತ್ತು ವಿತರಣೆಗಾಗಿ ವ್ಯವಸ್ಥೆ ಮಾಡಲಾಗಿದೆ.ಈಗಾಗಲೇ ಗೋಧಿ ಹಿಟ್ಟಿನ ಬರ್ಫಿ, ಬೆಲ್ಲದ ಪಾಕದಿಂದ ತಲಾ 60 ಸಾವಿರ ಕಾಳು ಲಾಡು, 1.2 ಲಕ್ಷ ಅಕ್ಕಿ ವಡೆ ತಯಾರಿಸಲಾಗಿದೆ. ಹಾಗು ಅನ್ನಸಂತರ್ಪಣೆಗಾಗಿ 100ಕ್ಕೂ ಅಧಿಕ ಬಾಣಸಿಗರಿಂದ ಭೋಜನದ ಸಿದ್ಧತೆಗಳು ನಡೆಯುತ್ತಿವೆ. ಅಲ್ಲದೆ 17ರ ಮಧ್ಯಾಹ್ನ 2 ಗಂಟೆಯಿಂದ ರಿಂದ 18ರ ಬೆಳಿಗ್ಗೆ 7ರವರೆಗೆ ರಥಬೀದಿ ಹಾಗು ಅಲ್ಲಿನ ಸುತ್ತ ಮುತ್ತಲಿನ ಪ್ರದೇಶದಲ್ಲಿ ವಾಹನ ಪ್ರವೇಶ ಮತ್ತು ನಿಲುಗಡೆ ನಿಷೇಧಿಸಲಾಗಿದೆ.


