ಕೈಕಂಬ : ಪರಾರಿಯಲ್ಲಿ ಶನಿವಾರ ಸಂಜೆ ಸಂಭವಿಸಿದ ಭೀಕರ ಕಾರು ಮತ್ತು ಬಸ್ಸು ಮುಖಾಮುಖಿ ಅಪಘಾತದಲ್ಲಿ ಕಾರಿನ ಚಾಲಕ ಸ್ಥಳದಲ್ಲೇ ಅಸುನೀಗಿದ್ದಾರೆ. ಮೃತರನ್ನು ಕುಡುಪಿಗೆ ಹತ್ತಿರದ ಪಾಲ್ದನೆ ಬಸ್ ತಂಗುದಾಣದ ಹತ್ತಿರದ ಮನೆಯ ನಿವಾಸಿ ವರ್ನನ್ ಬ್ರಾಯನ್ ಸಾಲ್ವಡೋರ್ ಡಿ’ಸಿಲ್ವ(53) ಎಂದು ಗುರುತಿಸಲಾಗಿದೆ.
ಬಸ್ ಮಂಗಳೂರಿನಿಂದ ಮೂಡಬಿದ್ರೆಯಾಗಿ ಉಪ್ಪಿನಂಗಡಿಗೆ ತೆರಳುತ್ತಿದ್ದರೆ, ಕಾರು ಪರಾರಿ ಮೂಲಕ ಮಂಗಳೂರಿನತ್ತ ಸಾಗುತ್ತಿತ್ತು. ಕೆತ್ತಿಕಲ್ ಬಳಿಯ ತಿರುವಿನಲ್ಲಿ ಅತಿ ವೇಗವಾಗಿ ಸಾಗುತ್ತಿದ್ದ ಬಸ್ಸು ಎದುರಿನಿಂದ ಬರುತ್ತಿದ್ದ ಮಾರುತಿ-800 ಕಾರಿಗೆ ಡಿಕ್ಕಿಯಾಗಿದೆ. ರಸ್ತೆಯಲ್ಲಿ ಮಾರುದ್ದ ಎಸೆಯಲ್ಪಟ್ಟ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದರೆ, ನಿಯಂತ್ರಣ ಕಳೆದುಕಂಡ ಬಸ್ಸು ರಸ್ತೆ ಮಧ್ಯೆ ಉರುಳಿ ಬಿದ್ದಿದೆ.
ಬಸ್ಸಿನಲ್ಲಿ ಪ್ರಯಾಣಿಕರು ತುಂಬಿದ್ದು, ಅಪಘಾತದಲ್ಲಿ ಸುಮಾರು 10ರಿಂದ 12 ಮಂದಿಗೆ ಗಂಭೀರ ಹಾಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ರಸ್ತೆ ಮಧ್ಯೆ ಉರುಳಿದ ಬಸ್ಸು ಮತ್ತು ಕಾರನ್ನು ಜೆಸಿಬಿ ಬಳಸಿ ತೆರವುಗೊಳಿಸಲಾಯಿತು. ಈ ವೇಳೆ ಸ್ವಲ್ಪ ಹೊತ್ತು ಸಂಚಾರ ಸ್ಥಗಿತಗೊಂಡಿತು. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಸ್ಥಳದಲ್ಲಿ ಮಹಜರು ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
