ಬಂಟ್ವಾಳ : ತಾಲೂಕಿನ ಬಿ ಸಿ ರೋಡಿನಲ್ಲಿ ಪತ್ರಕರ್ತನಿಗೆ ಹಿಂಟ್ ಆಂಡ್ ರನ್ ನಡೆಸಿ ಗಾಯಗೊಳಿಸಿದ್ದ ಅರಫಾ ಹೆಸರಿನ ಕಂಟ್ರಾಕ್ಟ್ ಕ್ಯಾರೇಜ್ ಬಸ್ಸನ್ನು ಗುರುವಾರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಬಸ್ ಚಾಲಕನನ್ನು ಬಂಧಿಸಿದ್ದಾರೆ.ಬಂದಿತ ಬಸ್ ಚಾಲಕನನ್ನು ಉಪ್ಪಿನಂಗಡಿ ನಿವಾಸಿ ಹಸೈನಾರ್ ಎಂದು ಹೆಸರಿಸಲಾಗಿದ್ದು ಇನ್ನೋರ್ವ ಆರೋಪಿ ಬಸ್ ನಿರ್ವಾಹಕ ತಲೆಮರೆಸಿಕೊಂಡಿದ್ದಾನೆ.
ತಾಲೂಕಿನ ಪತ್ರಕರ್ತ ನೇರಳಕಟ್ಟೆ ನಿವಾಸಿ ಅಬ್ದುಲ್ ಲತೀಫ್ ಅವರು ನ 19 ರಂದು ಬಿ ಸಿ ರೋಡಿನ ಹೋಟೆಲ್ ಸತ್ಕಾರ್ ಬಳಿ ಹೆದ್ದಾರಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಸಂದರ್ಭ ಮಂಗಳೂರಿನಿಂದ ಧಾವಿಸಿ ಬಂದ ಅರಫಾ ಎಂಬ ಹೆಸರಿನ ಕಂಟ್ರಾಕ್ಟ್ ಕ್ಯಾರಿಯೇಜ್ ಬಸ್ಸು ಚಾಲಕ ಪ್ರಯಾಣಿಕರನ್ನು ಹತ್ತಿಸುವ ಹಾಗೂ ಇಳಿಸುವ ಧಾವಂತದಲ್ಲಿ ಡಿಕ್ಕಿ ಹೊಡೆದು ಪರಾರಿಯಾಗಿತ್ತು.
ಈ ಸಂಬಂಧ ನ 25 ರಂದು ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಬಸ್ಸು ಚಾಲಕ-ನಿರ್ವಾಹಕರ ವಿರುದ್ದ ದೂರು ದಾಖಲಾಗಿತ್ತು.
ಲತೀಫ್ ಅವರ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸರು ಆರೋಪಿತ ಅರಫಾ ಬಸ್ಸಿನ ಚಾಲಕ ಹಾಗೂ ನಿರ್ವಾಹಕರ ವಿರುದ್ದ ಠಾಣಾ ಅಪರಾಧ ಕ್ರಮಾಂಕ 126/2019 ಕಲಂ 279, 337 ಐಪಿಸಿ ಹಾಗೂ 134(ಎ) ಹಾಗೂ (ಬಿ) ಐಎಂವಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಬಗ್ಗೆ ಕಾರ್ಯಪ್ರವೃತ್ತರಾದ ಪೊಲೀಸರು ಗುರುವಾರ ಅರಫಾ ಕಂಟ್ರಾಕ್ಟ್ ಕ್ಯಾರಿಯೇಜ್ ಬಸ್ಸನ್ನು ವಶಕ್ಕೆ ಪಡೆದುಕೊಂಡಿದ್ದು, ಚಾಲಕನನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಕಂಟ್ರಾಕ್ಟ್ ಕ್ಯಾರಿಯೇಜ್ ಬಸ್ಸುಗಳು ಸಾರಿಗೆ ನಿಯಮಾವಳಿಯಂತೆ ಪರವಾನಿಗೆ ಪಡೆದ ಸ್ಥಳಗಳಲ್ಲಿ ಅಲ್ಲದೆ ದಾರಿ ಮಧ್ಯೆ ಜನರನ್ನು ಹತ್ತಿಸುವಂತೆಯೂ ಇಲ್ಲ, ಇಳಿಸುವಂತೆಯೂ ಇಲ್ಲ. ಮಂಗಳೂರಿನಿಂದ ಜನ ಹತ್ತಿಸಿದ ಬಳಿಕ ನೇರವಾಗಿ ತಮ್ಮ ಪರವಾನಿಗೆಯ ಸ್ಥಳವಾದ ಉಪ್ಪಿನಂಗಡಿ, ಪುತ್ತೂರು, ಧರ್ಮಸ್ಥಳ ಮೊದಲಾದ ನಿರ್ದಿಷ್ಟ ಜಾಗದಲ್ಲಿ ಮಾತ್ರ ನಿಲ್ಲಿಸತಕ್ಕದ್ದು. ನಡುವೆ ನಿಲ್ಲಿಸಿ ಜನ ಹತ್ತಿಸುವುದು ಕಾನೂನು ಬಾಹಿರ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದು, ಈ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

