ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. “ಭಾಷೆ ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ಒಂದು. ಮನುಷ್ಯ ಜೀವಿಸಲು ಗಾಳಿ, ನೀರು, ಆಹಾರ, ನಿದ್ದೆಯಂತೆ ಭಾಷೆ ಕೂಡ ಅಷ್ಟೇ ಅತ್ಯಗತ್ಯ. ಭಾಷೆ ಇಂದು ಕೇವಲ ಭಾವನೆಗಳನ್ನು ವಿನಿಮಯ ಮಾಡಿಕೊಳ್ಳುವುದಕ್ಕೆ ಸೀಮಿತವಾಗಿಲ್ಲ.
ಅದನ್ನು ಅನೇಕ ಮಹತ್ವ ಕಾರ್ಯಗಳನ್ನು ನಿರ್ವಹಿಸುವ ಸಾಧನವಾಗಿದೆ. ಕನ್ನಡ ಭಾಷೆಯ ಬೆಳವಣಿಗೆ ಆಗಬೇಕೆಂದರೆ ಪ್ರಾಥಮಿಕ ಹಂತದ ಶಿಕ್ಷಣ ಮಾತೃಭಾಷೆಯಲ್ಲೇ ಇರಬೇಕು ಎನ್ನುವ ವಿಚಾರಕ್ಕೆ ಬದ್ಧರಾಗಿರಬೇಕು. ಆಗ ಮಾತ್ರ ಭಾಷೆ ಬೆಳೆಯಲು ಸಾಧ್ಯ. ನಾಡು, ನಾಡಭಾಷೆಯ ಬಗೆಗಿನ ಪ್ರೀತಿ ಗೌರವಗಳು ನಮ್ಮ ಸ್ವಾಭಿಮಾನದ ಸಂಕೇತ. ನಮ್ಮ ಭಾಷಾಭಿಮಾನ ಕೇವಲ ನವೆಂಬರ್ ತಿಂಗಳಿನಲ್ಲಿ ಮಾತ್ರ ಜಾಗೃತವಾಗಬಾರದು. ಅದು ನಮ್ಮ ಉಸಿರಿನಲ್ಲಿ ಬೆರೆತು ಹೋಗಬೇಕು. ಕನ್ನಡದ ಕಸ್ತೂರಿಯನ್ನು ಹೊಸ ಉಸಿರಿನಿಂದ ತೀಡಿ, ಹೊಸ ಶಕ್ತಿಯನ್ನಾಗಿ ಎಬ್ಬಿಸಿ, ಅದರ ಸುಗಂಧವನ್ನು ಎಲ್ಲಾ ದಿಕ್ಕಿಗೆ ಹರಡಿಸುವ ಜೊತೆಗೆ ಕನ್ನಡವನ್ನು ರಕ್ಷಿಸಿ ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅಂತೆಯೇ ಕರ್ನಾಟಕ ರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ 1206 ವಿದ್ಯಾರ್ಥಿಗಳನ್ನು ಒಳಗೊಂಡ ಏಕೈಕ ಶಾಲೆ, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ. ಇಂತಹ ಶಾಲೆಯ ವಿದ್ಯಾರ್ಥಿಯಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ” ಎಂದು ವಿದ್ಯಾರ್ಥಿಯಾದ 7ನೇ ತರಗತಿಯ ಕೆ.ಕೆ ಧನುಷ್ ಅವರು ಕನ್ನಡ ರಾಜ್ಯೋತ್ಸವ ಕುರಿತು ನುಡಿದರು.

7ನೇ ತರಗತಿಯ ವಿದ್ಯಾರ್ಥಿಗಳು ಡಿ. ಎಸ್ ಕರ್ಕಿಯವರ ‘ಹಚ್ಚೇವು ಕನ್ನಡದ ದೀಪ’ ಹಾಡನ್ನು ಹಾಡುವುದರ ಮೂಲಕ ಕಾರ್ಯಕ್ರಮ ಆರಂಭವಾಯಿತು. ನಂತರ ವಿದ್ಯಾರ್ಥಿಗಳಿಂದ ನೃತ್ಯ, ರೂಪಕ, ಕಂಸಾಳೆ ಇತ್ಯಾದಿ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಅಧ್ಯಾಪಕರಾದ ದೇವಿಕಾರವರು ಕರ್ನಾಟಕದ ಉದಯ, ಕನ್ನಡ ಭಾಷೆ, ನಾಡು ನುಡಿಯ ಇತಿಹಾಸವನ್ನು ತಿಳಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿನಿಯರು ಜ್ಞಾನಪೀಠ ಪುರಸ್ಕೃತರಾದ ಕುವೆಂಪುರವರು ರಚಿಸಿದ ನಾಡಗೀತೆಯನ್ನು ಹಾಡಿದರು. 7ನೇ ತರಗತಿಯ ಧನುಷ್ ಕಾರ್ಯಕ್ರಮವನ್ನು ನಿರೂಪಿಸಿದನು. ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಯರಾದ ರವಿರಾಜ್ ಕಣಂತೂರು, ಪೋಷಕರು ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.


