ಬಂಟ್ವಾಳ:ಧಾರ್ಮಿಕ ಮತ್ತು ಆಧ್ಯಾತ್ಮಿಕ ಶಕ್ತಿಯ ತವರೂರು ಎಂದು ಗುರುತಿಸಿಕೊಂಡಿರುವ ಈ ದೇಶದಲ್ಲಿ ಧಾರ್ಮಿಕತೆ ಮೂಲಕ ರಾಷ್ಟ್ರೀಯತೆ ಮತ್ತು ಇಲ್ಲಿನ ಸಂಸ್ಕಾರವನ್ನು ಪ್ರತಿಬಿಂಬಿಸುತ್ತದೆ ಎಂದು ಕಟೀಲು ಕ್ಷೇತ್ರದ ಕಮಲಾದೇವಿ ಅಸ್ರಣ್ಣ ಹೇಳಿದ್ದಾರೆ.ಇಲ್ಲಿನ ರಾಯಿ-ಕೊಯಿಲ-ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಮತ್ತು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಕೊಯಿಲ ಶ್ರೀ ಮಹಾಗಣಪತಿ ದೇವಸ್ಥಾನ ಬಳಿ ಮಂಗಳವಾರ ಸಮಾರೋಪಗೊಂಡ 17ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಇಲ್ಲಿನ ಸಮಿತಿಯು ಕಳೆದ ಹಲವು ವರ್ಷಗಳಿಂದ ಶಾರದೆಯ ಆರಾಧನೆ ಜೊತೆಗೆ ಶೈಕ್ಷಣಿಕ ಮತ್ತು ಸಾಮಾಜಿಕ ನೆರವು ನೀಡುವ ಮೂಲಕ ಸಮಾಜಮುಖಿ ಚಟುವಟಿಕೆಗಳಿಂದ ಜನತೆ ಮತ್ತು ದೇವರಿಗೆ ಹತ್ತಿರವಾಗಿದೆ ಎಂದರು. ಸಮಿತಿ ಗೌರವಾಧ್ಯಕ್ಷ, ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಯಕ್ಷಗಾನ ಅರ್ಥಧಾರಿ ಹಿರಣ್ಯ ವೆಂಕಟೇಶ್ವರ ಭಟ್ ಧಾರ್ಮಿಕ ಉಪನ್ಯಾಸ ನೀಡಿ, ಶ್ರದ್ಧಾ ಭಕ್ತಿ ಮತ್ತು ಅರ್ಥಪೂರ್ಣ ಧಾರ್ಮಿಕ ಆಚರಣೆಯಿಂದ ಭಗವಂತನ ಸಾಕ್ಷಾತ್ಕಾರ ಸುಲಭವಾಗಿ ಲಭ್ಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಮಾತನಾಡಿ, ನೂತನ ಸಭಾಂಗಣ ನಿರ್ಮಿಸಲು ರೂ 2ಲಕ್ಷ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.
ಮುಂಬೈ ಉದ್ಯಮಿ ನಗ್ರಿಗುತ್ತು ವಿವೇಕ್ ಶೆಟ್ಟಿ, ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಶುಭ ಹಾರೈಸಿದರು.
ಉದ್ಯಮಿ ಶೇಖರ ಅಂಚನ್, ಎಂ.ಸಿ.ಶೆಟ್ಟಿ ಮಂಗಳೂರು, ದೇವಿಚರಣ್ ಶೆಟ್ಟಿ, ವಕೀಲ ರಂಜಿತ್ ಮೈರ, ಕ್ರೀಡಾಪಟು ರತನ್ ಶೆಟ್ಟಿ, ಅರಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತುಂಗಪ್ಪ, ಬಿಜೆಪಿ ಮುಖಂಡ ದೇವಪ್ಪ ಪೂಜಾರಿ, ಟ್ರಸ್ಟಿನ ಅಧ್ಯಕ್ಷ ಎಂ.ದುರ್ಗಾದಾಸ್ ಶೆಟ್ಟಿ ಮಾವಂತೂರು, ಸಮಿತಿ ಅಧ್ಯಕ್ಷ ರಂಜನ್ ಕುಮಾರ್ ಶೆಟ್ಟಿ ಮತ್ತಿತರರು ಇದ್ದರು.
ಟ್ರಸ್ಟಿ ವಸಂತ ಕುಮಾರ್ ಅಣ್ಣಳಿಕೆ ಸ್ವಾಗತಿಸಿ, ಕಾರ್ಯದರ್ಶಿ ಡೊಂಬಯ ಬಿ.ಅರಳ ಪ್ರಾಸ್ತಾವಿಕ ಮಾತನಾಡಿದರು. ಕೋಶಾಧಿಕಾರಿ ಹರೀಶ ಪೂಜಾರಿ ಬಾಡಬೆಟ್ಟು ವಂದಿಸಿದರು. ದಿನೇಶ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮ ಬಳಿಕ ತೆಂಕು ಮತ್ತು ಬಡಗುತಿಟ್ಟು ಕಲಾವಿದರಿಂದ ‘ಯಕ್ಷಗಾನ ನಾಟ್ಯ ವೈಭವ’ ಕಾರ್ಯಕ್ರಮ ನಡೆಯಿತು.
