ಬಂಟ್ವಾಳ : ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಸೇವೆಯೇ ನಿಜವಾದ ಸೇವೆ. ದೇಶದ ಮಾನವೀಯ ಆಧಾರಸ್ಥಂಭವು ಸೇವೆ ಮತ್ತು ತ್ಯಾಗ. ಸೇವೆಯನ್ನು ಜೀವನದ ಹವ್ಯಾಸ ಮತ್ತು ಮನೋಭಾವದಿಂದ ಬೆಳೆಸಿದರೆ ಉತ್ತಮ ವ್ಯಕ್ತಿತ್ವ ನಿರ್ಮಾಣ ವಾಗುವುದು ಎಂದು ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇಲ್ಲಿನ ಪ್ರಾಧ್ಯಾಪಕ ವಿನೋದ್ ಶೆಟ್ಟಿ ನುಡಿದರು.
ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸೇವಾಯೋಜನೆಯ ಸ್ಥಾಪನಾ ದಿನಾಚರಣೆಯ ಅಂಗವಾಗಿ ಸೇವೆ-ಭಾರತೀಯ ಪರಿಕಲ್ಪನೆ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಷ್ಟ್ರೀಯ ಸೇವಾಯೋಜನೆಯ ಸ್ವಯಂಸೇವಕರ ಮನಸ್ಸು ವಿಶಾಲವಾಗಿದ್ದು, ಕಿವಿ ಸದಾ ಸಮಾಜದ ಸೇವೆಗಾಗಿ ತೆರೆದಿರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಸಂಚಾಲಕ ವಸಂತ ಮಾಧವ ವಹಿಸಿದರು. ಕಾಲೇಜಿನ ಕನ್ನಡ ಉಪನ್ಯಾಸಕ ಯತಿರಾಜ್, ಯೋಜನಾಧಿಕಾರಿಯಾದ ಹರೀಶ್, ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿಶೇಷವಾಗಿ ತನ್ನ ಜೀವನವನ್ನು ಸಮಾಜದ ಸೇವೆಗೆ ಮುಡಿಪಾಗಿಟ್ಟ ವ್ಯಕ್ತಿತ್ವದ ಪರಿಚಯ ಮತ್ತು ಮಾಹಿತಿಯನ್ನು ದೃಶ್ಯ ಮಾಧ್ಯಮದ ಮೂಲಕ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಪ್ರಸ್ತುತಪಡಿಸಲಾಯಿತು. ವಿದ್ಯಾರ್ಥಿಗಳಾದ ಹಿತೇಶ್ ಸ್ವಾಗತಿಸಿ, ಹರ್ಷಿತಾ ವಂದಿಸಿ, ಧನ್ಯಶ್ರೀ ನಿರೂಪಿಸಿದರು


