ಉಡುಪಿ :ಜಿಲ್ಲಾ ನಾಗರಿಕ ಸಮಿತಿ ಮತ್ತು ಪಂಚರತ್ನ ಸೇವಾ ಟ್ರಸ್ಟ್ ಆಯೋಜನೆಯಲ್ಲಿ “ತೆನೆ ಹಬ್ಬದ ಪ್ರಯುಕ್ತ ಸೌಹಾರ್ದತೆಯಿಂದ ಕ್ರಿಶ್ಚನ್ ಬಂಧುಗಳಿಗೆ ಸಿಹಿ ತಿಂಡಿ ವಿತರಿಸಿ, ತೆನೆ ಹಬ್ಬದ ಶುಭಾಶಯ ಕೋರುವ ಕಾರ್ಯಕ್ರಮವು ಕವಿ ಮುದ್ದಣ ಮಾರ್ಗ ಇಲ್ಲಿಯ ಶೋಕಾ ಮಾತಾ ಚರ್ಚಿನ ಪ್ರಾಂಗಣದಲ್ಲಿ ನಡೆಯಿತು.
ಚರ್ಚಿನಲ್ಲಿ ಪ್ರಾರ್ಥನೆ, ತೆನೆ- ಕಬ್ಬು ವಿತರಣೆ ಧಾರ್ಮಿಕ ವಿಧಿ ವಿಧಾನಗಳು ಮುಗಿದ ಬಳಿಕ, ಚರ್ಚಿನ ಧರ್ಮಗುರುಗಳಾದ ವಂದನೀಯ ಫಾದರ್ ವಲೇರಿಯನ್ ಮೆಂಡೊನ್ಸಾ ಬೆಲ್ಲ-ಕೊಬ್ಬರಿ ಬರ್ಫಿಯನ್ನು ಭಕ್ತರಿಗೆ ವಿತರಿಸುವ ಮೂಲಕ, ಸಿಹಿ ಹಂಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಹುವಿಧ ಖಾದ್ಯಗಳ ಮಿಶ್ರಣದಿಂದ ತಯಾರಿಸಿದ ಬರ್ಫಿಯನ್ನು ಸಾವಿರಕ್ಕೂ ಅಧಿಕ ಕ್ರಿಶ್ಚನ್ ಬಂಧುಗಳಿಗೆ ವಿತರಿಸಲಾಯಿತು. ಕಳೆದ ವರ್ಷದ ತೆನೆ ಹಬ್ಬದಂದು ಪ್ರತಿಯೊಬ್ಬರಿಗೂ ಗಿಡ ನೀಡಿ ಸಮಿತಿಯವರು ತೆನೆ ಹಬ್ಬದಂದು ಹಸಿರು ಹಬ್ಬ ಆಚರಿಸಿ ಪ್ರಕೃತಿ ಪ್ರೇಮ ಮೆರೆದಿದ್ದರು. ಈ ಬಾರಿ ವಿನೂತನವಾಗಿ ಸಿಹಿ ಹಬ್ಬ ಆಚರಿಸಿ ಸೌರ್ಹದತೆ ಮೆರೆದಿದ್ದಾರೆ.
ಮಂಡ್ಯದ ಅಂಟು ಬೆಲ್ಲ, ಗುಂಡಿಟ್ಟು, ಗೀರ್ ತಳಿಯ ದನದ ತುಪ್ಪ, ಪಚ್ಚೆ ಕರ್ಪೂರ, ಜಾಯಿ ಕಾಯಿ, ತುಮಕೂರಿನ ಒಣಕೊಬ್ಬರಿ, ಎಲಕ್ಕಿ ಮಿಶ್ರಣಗೊಳಿಸಿ ಹೊಸ ರುಚಿಯ ಅನುಭವ ನೀಡುವ ಬರ್ಫಿಯನ್ನು ಜಂಟಿ ಸಮಿತಿಯವರು ತೆನೆ ಹಬ್ಬದ ಪ್ರಯುಕ್ತ ಕ್ರಿಶ್ಚನ್ ಬಂಧುಗಳಿಗೆ ನೀಡಲೆಂದು, ಮುಂಚಿತವಾಗಿ ಪಾಕತಜ್ಞ ಕಿನ್ನಿಮೂಲ್ಕಿ ಗುರುರಾಜ್ ಆಚಾರ್ಯರ ತಂಡದಿಂದ ಬರ್ಫಿ ತಯಾರಿಸಿ ಇಟ್ಟಿದ್ದರು. ಬರ್ಫಿ ಸವಿದ ಕ್ರಿಶ್ಚನ್ ಬಂಧುಗಳು ಜಂಟಿ ಸಮಿತಿಯ ಸೌರ್ಹಾದ ಭಾವನೆಗೆ ಧನ್ಯವಾದ ಸಮರ್ಪಿಸಿದರು. ಜಂಟಿ ಸಮಿತಿಯ ಪದಾಧಿಕಾರಿಗಳಿಗೆ ಧರ್ಮಗುರುಗಳು ತೆನೆ ಗುಚ್ಚ, ಕಬ್ಬು ನೀಡಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಫಾದರ್ ಸ್ಟೀವನ್ ಫೆರ್ನಾಂಡಿಸ್, ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯ ಕೆ.ಬಾಲಗಂಗಾಧರ ರಾವ್, ಪಂಚರತ್ನ ಸೇವಾ ಟ್ರಸ್ಟಿನ ಉಪಾಧ್ಯಕ್ಷ ತಾರಾನಾಥ್ ಮೇಸ್ತ ಶಿರೂರು, ಪ್ರಧಾನ ಕಾರ್ಯದರ್ಶಿ ಸಂತೋಷ್ ಸರಳಬೆಟ್ಟು ಚರ್ಚಿನ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಇರ್ವಿನ್ ಆಳ್ವ, ಗ್ರೇಶಿಯಸ್ ಬೊತೆಲ್ಲೊ, ಅಲ್ಫೊನ್ಸ್ ಡಿ ಕೋಸ್ತಾ, ಮೈಕಲ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
