ಕೋಲಾರ: ನಾವು ನಾಟಿಮಾಡಿದ ಸಸಿಗಳನ್ನು ಪೋಷಣೆ ಮತ್ತು ರಕ್ಷಣೆ ಮಾಡಿ ಬೆಳೆಸಿದಲ್ಲಿ ನಮ್ಮ ರೋಟರಿ ಕೋಟಿ ನಾಟಿ ಯೋಜನೆ ಎರಡು ವರ್ಷಗಳಲ್ಲಿ ಯಶಸ್ವಿಯಾಗುವುದು ಖಚಿತ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ರೋಟರಿ ಕೋಟಿ ನಾಟಿ ಯೋಜನೆ ಅಧ್ಯಕ್ಷ ಕೆ.ಅಮರನಾರಾಯಣ ರವರು ಅಭಿಪ್ರಾಯಪಟ್ಟರು.ತಾಲ್ಲೂಕಿನ ಊರಗಿಲಿ ಗ್ರಾಮಪಂಚಾಯಿತಿ ಬುಸನಹಳ್ಳಿ ಗ್ರಾಮದ ಶ್ರೀ ಭೂತಮ್ಮತಾಯಿ ದೇವಾಲಯದ ಆವರಣದಲ್ಲಿ ಬೆಂಗಳೂರು ರೋಟರಿ ಅರ್ಚಡ್ ಹಾಗೂ ರಾಮಮೂರ್ತಿನಗರ ಮತ್ತು ಕೋಲಾರ ರೋಟರಿ ಕ್ಲಬ್ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ರೋಟರಿ ಕೋಟಿ ನಾಟಿ ಯೋಜನೆಯ ವತಿಯಿಂದ ನಡೆದ 500ಕ್ಕೂ ಹೆಚ್ಚು ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಒಂದು ವರ್ಷದಿಂದ ಬಯಲುಸೀಮೆ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಾಮರಾಜನಗರದಲ್ಲಿ ರೋಟರಿ ಕೋಟಿ ನಾಟಿ ಯೋಜನೆಯ ಮೂಲಕ ಇದುವರೆಗೂ 18 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದ್ದು, ಯಶಸ್ವಿಯಾಗಿ ಮುಂದುವರೆದು ಇಂದು ಬೆಂಗಳೂರಿನ ಸುಹಾಸ್ ಜಿಂಗಾಡಿಯ ತಂಡ ಪ್ರಾಯೋಜಕತೆಯಲ್ಲಿ 500 ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಬುಸನಹಳ್ಳಿ ಗ್ರಾಮದಲ್ಲಿ ನಡೆಸುತ್ತಿರುವುದು ಸಂತಸ ತಂದಿದೆ, ಉರಿಗಿಲಿ ಗ್ರಾಮ ಪಂಚಾಯಿತಿಯವರು ನಾವು ನಾಟಿಮಾಡಿದ ಸಂಪಿಗೆ. ಆಕಾಶಮಲ್ಲಿಗೆ, ಬೇವು, ಮಹಾಗನಿ ಸೇರಿದಂತೆ 20 ಅರಣ್ಯ ಜಾತಿಯ ಸಸಿಗಳನ್ನು ಪೋಷಿಸಿ ರಕ್ಷಿಸಿ ಎಂದು ಮನವಿ ಮಾಡಿದರು.
ರೋಟರಿ ಜಿಲ್ಲೆ 3190 ಉಪ ರಾಜ್ಯಪಾಲರಾದ ಬಿ.ಕೆ.ದೇವರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅಥಿತಿಗಳಾಗಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ರೋಟರಿ ಜಿಲ್ಲೆ ಉಪ ರಾಜ್ಯಪಾಲರಾದ ಅ.ಮು.ಲಕ್ಷ್ಮಿನಾರಾಯಣ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಬಾಬು, ಊರಿಗಿಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಗುಣಮ್ಮ ರಾಮಸ್ವಾಮಿ ಉಪಸ್ಥಿತರಿದ್ದರು.ಈ ಕಾರ್ಯಕ್ರಮದಲ್ಲಿ ಕೋಲಾರ ರೋಟರಿ ಕ್ಲಬ್ ಅಧ್ಯಕ್ಷ ಡಾ|| ವೆಂಕಟರಮಣಪ್ಪ, ರಾಮಮೂರ್ತಿನಗರ ರೋಟರಿ ಕ್ಲಬ್ ಅಧ್ಯಕ್ಷ ಅಪ್ಪಯ್ಯ, ರೋಟರಿಯನ್ ವೆಂಕಟಸ್ವಾಮಿ, ಗೋಪಾಲಕೃಷ್ಣ, ಗೋವಿಂದ್ ರಾಜ್, ರೋಟರಿ ಕೋಟಿ ನಾಟಿ ಯೋಜನೆ ನೂಡಲ್ ಅಧಿಕಾರಿಗಳಾದ ಜಯರಾಮೇಗೌಡ, ಸೊಣ್ಣೇಗೌಡ, ಪಿಡಿಓ ರವಿ, ಸುಹಾಸ್ ಜಿಂಗಾಡಿಯ ತಂಡದ ಅಂಜಲಿ, ಮೋಹನ್, ಶ್ರೀನಿವಾಸ್, ಚಿತ್ರ ಬಾಲು, ಊರಿಗಿಲಿ ಗ್ರಾಮ ಪಂಚಾಯಿತಿ ಸದಸ್ಯರಾದ ವೆಂಕಟೇಶಪ್ಪ, ರಾಮಾಂಜಿ ಮತ್ತಿತರರು ಪಾಲ್ಗೊಂಡಿದ್ದರು.
