ಬಂಟ್ವಾಳ:ಪ್ರತಿಯೊಬ್ಬ ವಿದ್ಯಾರ್ಥಿಯ ಯಶಸ್ಸಿನ ಹಿಂದೆ ಗುರುವಿನ ಕಾಳಜಿ, ಶ್ರಮವಿದೆ. ಸಂಸ್ಕೃತಿಯ ಮಹತ್ವವನ್ನು ತಿಳಿಸುವ ಇಂತಹ ಕಾರ್ಯಕ್ರಮವನ್ನು ಶಾಲೆಯಲ್ಲಿ ಆಯೋಜಿಸಿರುವುದು ಶ್ಲಾಘನೀಯ. ವಸ್ತು ಪ್ರದರ್ಶನದಲ್ಲಿ ಇರುವ ಹಳೆಯ ಕಾಲದ ಅಮೂಲ್ಯ ವಸ್ತುಗಳನ್ನು ನೋಡುವಾಗ ಹಿರಿಯರ ಜೀವನ ಶೈಲಿ, ಅವರ ಬದುಕಿನ ಪಾಡು ಕಣ್ಣಿಗೆ ಕಟ್ಟಿದಂತಾಗುತ್ತದೆ. ಕೃಷಿ ಪ್ರಧಾನವಾಗಿದ್ದ ಅಂದಿನ ಸ್ಥಿತಿಗೂ ಇಂದಿಗೂ ಬಹಳ ವ್ಯತ್ಯಾಸವಿದೆ.
ನಾಡು, ಸಂಸ್ಕೃತಿ, ಭಾಷೆಗಳನ್ನು ಅರಿತರೆ ಮಾತ್ರವೇ ವ್ಯಕ್ತಿ ಬೆಳೆಯಲು ಸಾಧ್ಯ ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸ್ಥಾಪಕ ಡಾ. ತುಕಾರಾಮ ಪೂಜಾರಿ ಹೇಳಿದರು. ಅವರು ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಶಾಲೆಯ ಸ್ಕೌಟ್ಸ್ – ಗೈಡ್ಸ್ ವಿದ್ಯಾರ್ಥಿಗಳು ಆಯೋಜಿಸಿದ್ದ ಏರ್ಯ ಲಕ್ಷ್ಮೀನಾರಾಯಣ ಆಳ್ವರ ಸ್ಮರಣಾರ್ಥ ಹಮ್ಮಿಕೊಂಡ ವಸ್ತು ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ’ತುಳು ಸಿರಿದೊಂಪ’ವನ್ನು ಉದ್ಗಾಟಿಸಿ ಅವರು ಮಾತನಾಡಿದರು. ಏರ್ಯರು ಬಂಗಾರದ ಖಜಾನೆಯಿದ್ದಂತೆ, ಸಾಹಿತ್ಯಕ್ಕೆ ಅವರ ಕೊಡುಗೆ ಸದಾ ಸ್ಮರಣೀಯ. ತುಳು ಭಾಷೆಯು ದ್ರಾವಿಡ ಭಾಷೆಗಳಲ್ಲಿಯೇ ಉತ್ಕೃಷ್ಟವಾದ ಭಾಷೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಪ್ರಾಂಶುಪಾಲೆ ರಮಾಶಂಕರ್ ಸಿ. ಮಾತನಾಡಿ ಕಣ್ಮರೆಯಾಗುತ್ತಿರುವ ತುಳು ಸಂಸ್ಕೃತಿಯ ಬಗ್ಗೆ ಇಂದಿನ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಇದಾಗಿದೆ ಎಂದು ಹೇಳಿದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶ್ರೀ ಸಂಪತ್ ಕುಮಾರ್ ಶೆಟ್ಟಿ ವೇದಿಕೆಯಲ್ಲಿಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ತುಳುನಾಡಿನ ಜನರು ಬಳಸುತ್ತಿದ್ದ ಹಳೆಕಾಲದ ವಸ್ತುಗಳನ್ನು ಪ್ರದರ್ಶಿಸಲಾಯಿತು. ಸಭಾಕಾರ್ಯಕ್ರಮದ ಬಳಿಕ ಸ್ಕೌಟ್ಸ್ – ಗೈಡ್ಸ್ ವಿದ್ಯಾರ್ಥಿಗಳಿಂದ ನೃತ್ಯ, ಪ್ರಹಸನ, ಸಮೂಹಗಾಯನ ಜರುಗಿತು. ಬಳಿಕ ತುಳುನಾಡಿನ ವಿವಿಧ ಬಗೆಯ ಸಾಂಪ್ರದಾಯಿಕ ತಿನಿಸುಗಳನ್ನು ಅತಿಥಿಗಳಿಗೆ ವಿಶೇಷ ಭೋಜನದ ರೂಪದಲ್ಲಿ ನೀಡಲಾಯಿತು. ಶಿಕ್ಷಕ – ರಕ್ಷಕ ಸಂಘದ ಪದಾಧಿಕಾರಿ ಜಗನ್ನಾಥ ರೈ, ಶಿಕ್ಷಕ ವೃಂದದವರು, ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಗೈಡ್ಸ್ ಶಿಕ್ಷಕಿಯರಾದ ಜೂಲಿ ಟಿ.ಜೆ., ಕೇಶವತಿ ಹಾಗೂ ಸ್ಕೌಟ್ಸ್ ಮಾಸ್ಟರ್ ಹರೀಶ್ ಆಚಾರ್ಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
