ಮೂಡುಬಿದಿರೆ: ನೃತ್ಯ ಕ್ಷೇತ್ರದಲ್ಲಿ ಉದಯೋನ್ಮುಖ ಪ್ರತಿಭೆಯಾಗಿ ಮಿಂಚುತ್ತಿರುವ ಶೃಜನ್ಯ ಜೆ.ಕೆ ಹೋಮಲ್ಕೆ ಬೆಳುವಾಯಿ ಅವರಿಗೆ ಶನಿವಾರ ಮತ್ತು ಭಾನುವಾರ ಮೈಸೂರಿನಲ್ಲಿ ನಡೆದ ನ್ಯಾಶನಲ್ ಐಕಾನ್ ಮೋಡೆಲ್ ಹಂಟ್ ಸ್ಪರ್ಧೇಯಲ್ಲಿ ದಕ್ಷಿಣ ಭಾರತ ಮಟ್ಟದ ವಿಜೇತೆಯಾಗಿ ಹೊರ ಹೊಮ್ಮಿದ್ದಾರೆ.
ಪ್ರಸಿದ್ಧ ತಿಬ್ಬಾಸ್ ಗ್ರೂಪ್ ಆಯೋಜಿಸಿದ್ದ ಈ ಸ್ಪರ್ಧೆಯ ಮೂರು ವಿಭಾಗಗಳನ್ನು ಯಶಸ್ವಿಯಾಗಿ ಪೂರೈಸಿ ಪ್ರಿನ್ಸೆಸ್ ನೆಕ್ಸ್ಟ್ ಮೊಡೆಲ್ ಆಫ್ ಸೌತ್ ಇಂಡಿಯಾ ವಿನ್ನರ್ ಗೌರವಕ್ಕೆ ಪಾತ್ರರಾದರು. ಈಗಾಗಲೇ ಕರ್ನಾಟಕ ಪ್ರತಿಭಾ ರತ್ನ, ಮದಕರಿ ನಾಯಕ ರಾಜ್ಯ ಪ್ರಶಸ್ತಿ, ಗೋವಾದಲ್ಲಿ ಕರುನಾಡ ಪದ್ಮಶ್ರೀ, ವಿಶ್ವಮಾನ್ಯ ಕನ್ನಡಿಗ ಪ್ರತಿಭಾ ಗೌರವ, ನ್ಯಾಶನಲ್ ಟ್ಯಾಲೆಂಟೆಡ್ ಡ್ಯಾನ್ಸರ್ ಅವಾರ್ಡ್, ಕರ್ನಾಟಕ ಚೇತನ ಸೇರಿ ಅನೇಕ ಗೌರವಗಳು ಸಂದಿವೆ. ಟಿಸ್ಟರ್ ಡ್ಯಾನ್ಸ್ ಅಕಾಡೆಮಿಯ ನಿತಿನ್ ಅವರಲ್ಲಿ ವಿವಿಧ ನೃತ್ಯ, ಶಾರದಾ ಮಣಿ ಶೇಖರ್ ಅವರಲ್ಲಿ ಭರತನಾಟ್ಯ ಮತ್ತು ಬೆಳುವಾಯಿ ದೇವಾನಂದ ಭಟ್ ಅವರಲ್ಲಿ ಯಕ್ಷಗಾನವನ್ನು ಕಲಿಯುತ್ತಿದ್ದಾರೆ.
ಮೂಡುಬಿದಿರೆಯ ಡಿ.ಜೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿರುವ ಬಹುಮುಖ ಪ್ರತಿಭೆಯ ಬಾಲಕಿ ಯಕ್ಷಗಾನವನ್ನು ಕಲಿಯುತ್ತಿದ್ದು ಯಕ್ಷದೇವ ಮಿತ್ರ ಮಂಡಳಿಯ ೨೦೧೯ರ ಕಾರ್ಯಕ್ರಮದಲ್ಲಿ ಭಾರ್ಗವ ರಾಮ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಬೆಳುವಾಯಿಯ ಜಯಂತ್ ಪೂಜಾರಿ ಮತ್ತು ಶಶಿಕಲಾ ದಂಪತಿಯ ಪುತ್ರಿಯಾಗಿದ್ದಾರೆ.
