ವಾಮಂಜೂರು: ಪಿಲಿಕುಳ ಉದ್ಯಾನದ ಪ್ರಾಣಿಗಳ ಆಹಾರ, ಆರೋಗ್ಯ ಸೇವೆ ಮತ್ತು ಪ್ರಾಣಿಗಳ ಜೈವಿಕ ಉದ್ಯಾನಕ್ಕೆ ಉಸ್ತುವಾರಿಗೆ ಎಂಆರ್ಪಿಎಲ್ 3.4 ಕೋಟಿ ರೂ ಅನುದಾನ ನೀಡಿದೆ. ಈ ಅನುದಾನ ವಿನಿಯೋಗಿಸಲಾಗುವುದು ಎಂದು ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಎಚ್ ಜಯಪ್ರಕಾಶ್ ಭಂಡಾರಿ ಹೇಳಿದರು.
ಪಶ್ಚಿಮ ಘಟ್ಟದಲ್ಲಿ ವಿನಾಶದಂಚಿನಲ್ಲಿರುವ ಜೀವಿಗಳು ಮತ್ತು ವೃಕ್ಷಗಳ ರಕ್ಷಣೆ ಹಾಗೂ ಅಭಿವೃದ್ಧಿಯೇ ಪಿಲಿಕುಳ ಜೈವಿಕ ಉದ್ಯಾನ ರಚನೆಯ ಉದ್ದೇಶ. ಕಳೆದೆರಡು ವರ್ಷದಿಂದ ಎಂಆರ್ಪಿಎಲ್ ಪಿಲಿಕುಳ ಜೈವಿಕ ಉದ್ಯಾನದ ಹಸಿರೀಕರಣದೊಂದಿಗೆ ಕೈಜೋಡಿಸಿದೆ. ದೇಶದ ಬೃಹತ್ ಮೃಗಾಲಯವೆಂದು ಗುರುತಿಸಲ್ಪಟ್ಟಿರುವ ಇಲ್ಲಿ 120 ಜಾತಿಯ 1200 ಪ್ರಾಣಿ-ಪಕ್ಷಿಗಳಿವೆ. ಸಾರ್ವಜನಿಕರ ದೇಣಿಗೆ ಹಾಗೂ ಪ್ರವಾಸಿಗರ ಪ್ರವೇಶ ಶುಲ್ಕದಲ್ಲಿ ಉದ್ಯಾನದ ನಿರ್ವಹಿಸುತ್ತಿರುವುದು ವಿಶೇಷ ಎಂದರು.
ಎಂಆರ್ಪಿಎಲ್ ಕಚೇರಿಯಲ್ಲಿ ನಡೆದ ಅನುದಾನ ಹಸ್ತಾಂತರ ಸಮಾರಂಭದಲ್ಲಿ ಸಂಸ್ಥೆಯ ಜಿಜಿಎಂ ಎಸ್ ರವಿಪ್ರಸಾದ್, ಸಿಜಿಎಂ ಹರೀಶ್ ಬಾಳಿಗ ಹಾಗೂ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಹಣಾ ನಿರ್ದೇಶಕಿ ಮೇಘನಾ, ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಎಚ್ ಜಯಪ್ರಕಾಶ್ ಭಂಡಾರಿ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
