ಕೋಲಾರ : ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಮ್ಮಿಶ್ರ ಸರ್ಕಾರವನ್ನು ವಜಾಗೊಳಿಸುವಂತೆ ರಾಷ್ಟ್ರಪತಿ ಆಡಳಿತ ಜಾರಿಗೆ ಒತ್ತಾಯಿಸಿ ಇಂದು ರೈತ ನಾಯಕ ಪ್ರೊ|| ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕವು ಕೋಲಾರ ನಗರ ಕೆ.ಎಸ್.ಆರ್.ಟಿ. ಬಸ್ ನಿಲ್ದಾಣದ ವೃತ್ತದಲ್ಲಿ ರಾಜೀನಾಮೆ ಕೊಟ್ಟ 13 ಶಾಸಕರ ಪ್ರತಿಕೃತಿ ದಹನ ಮಾಡಿ ಹೋರಾಟ ಮಾಡಲಾಯಿತು. ಅಲ್ಲಿಂದ ಕೋಲಾರ ತಹಸೀಲ್ದಾರ್ ಕಛೇರಿಗೆ ತೆರಳಿ ತಹಸೀಲ್ದಾರ್ ಗಾಯಿತ್ರಮ್ಮರವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರ ಮಂತ್ರಿಗಳು, ಶಾಸಕರು ಸಾಲು ಸಾಲಾಗಿ ಅಧಿಕಾರಕ್ಕೋಸ್ಕರ ರಾಜಿನಾಮೆ ನೀಡುತ್ತಿದ್ದು, ಮತ ಹಾಕಿ ಆರಿಸಿದಂತಹ ಮತದಾರರಿಗೆ ಅಗೌರವ ಸೂಚಿಸುವ ರೀತಿ ನಡೆದುಕೊಳ್ಳುತ್ತಿದ್ದು, ಇವರ ರಾಜೀನಾಮೆ ಯಾವುದೇ ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕಲ್ಲ, ಚಿಕ್ಕ ಕಂದಮ್ಮಗಳು ಹಾಗೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವಾಗುತ್ತಿದೆ ಎಂದು ರಾಜೀನಾಮೆ ನೀಡಲಿಲ್ಲ್ಲ, ಮಹದಾಯಿ ನೀರಿಗಾಗಿ ರಾಜೀನಾಮೆ ನೀಡಿಲ್ಲ, ಬಯಲು ಸೀಮೆಯ ಜಿಲ್ಲೆಗಳ ಶಾಶ್ವತ ನೀರಿಗಾಗಿ ರಾಜೀನಾಮೆ ನೀಡಿಲ್ಲ, ನಿರುದ್ಯೋಗ ಸಮಸ್ಯೆ ಬಗೆಹರಿಸಲು ರಾಜೀನಾಮೆ ನೀಡಲಿಲ್ಲ, ಶರವಾತಿ, ಕಾವೇರಿ, ನೇತ್ರಾವತಿ ನದಿಯ ಉಳಿವಿಗಾಗಿ ರಾಜೀನಾಮೆ ನೀಡಲಿಲ್ಲ. ರಾಜ್ಯದಲ್ಲಿ ನೀರಿಗಾಗಿ ಆಹಾಕಾರ ಉಂಟಾಗಿ ರಾಜ್ಯದ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಡಿಸಲು ರಾಜೀನಾಮೆ ನೀಡಲಿಲ್ಲ.
ಶಾಸಕರುಗಳ ವೈಯುಕ್ತಿಕ ಮತ್ತು ರಾಜಕೀಯ ಅಧಿಕಾರದ ಲಾಭಕ್ಕಾಗಿ ರಾಜೀನಾಮೆ ನೀಡುತ್ತಿದ್ದು, ಕರ್ನಾಟಕÀ ರಾಜ್ಯದ ಜನರ ಮಾನವನ್ನು ದೇಶ ವಿದೇಶದಲ್ಲಿ ಹರಾಜು ಹಾಕುತ್ತಿದ್ದು, ರಾಜೀನಾಮೆ ನೀಡಿರುವ ಕ್ಷೇತ್ರಕ್ಕೆ ಮತ್ತೆ ಚುನಾವಣೆ ನಡೆಸಿ ಜನರ ತೆರಿಗೆ ಹಣ ಹಾಳು ಮಾಡುವ ಬದಲು ಹಿಂದಿನ ಚುನಾವಣೆಯಲ್ಲಿ ಎರಡೇ ಸ್ಥಾನದಲ್ಲಿ ಇದ್ದ ಅಭ್ಯರ್ಥಿಯನ್ನು ವಿಧಾನಸಭಾ ಸದಸ್ಯನೆಂದು ಆಯ್ಕೆ ಮಾಡಬೇಕು. ಆಗ ಯಾರೂ ರಾಜೀನಾಮೆ ನೀಡುವುದಿಲ್ಲ. ಇದಕ್ಕೆ ಒಪ್ಪದೆ ರಾಜೀನಾಮೆ ನೀಡಿದ ಅಭ್ಯರ್ಥಿಗಳು ಕ್ಷೇತ್ರ ಚುನಾವಣಾ ವೆಚ್ಚ ಭರಿಸಬೇಕು. ಈ ನಿಟ್ಟಿನಲ್ಲಿ ಸಂವಿಧಾನ ತಿದ್ದುಪಡಿಯ ಅಗತ್ಯವಿದೆ.

ರಾಜ್ಯದ ಅಭಿವೃದ್ಧಿ ಬಗ್ಗೆ ಗಮನ ಹರಿಸದೆ ರೆಸಾರ್ಟ್ ರಾಜಕಾರಣ ಮಾಡುತ್ತಿರುವ ಸರ್ಕಾರಗಳನ್ನು ವಜಾಗೊಳಿಸಬೇಕೆಂದು ಮನವಿಯಲ್ಲಿ ಹೋರಾಟಗಾರರು ಒತ್ತಾಯಿಸಿದ್ದಾರೆ.
ಈ ಹೋರಾಟದಲ್ಲಿ ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ, ಜಿಲ್ಲಾ ಪ್ರಾಧಾನ ಕಾರ್ಯದರ್ಶಿ ಜಿ. ನಾರಾಯಣಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ನಂದಕುಮಾರ್, ಜಿಲ್ಲಾಕಾರ್ಯಾಧ್ಯಕ್ಷ ಗಣೇಶ್, ಕೋಲಾರ ತಾಲ್ಲೂಕು ಅಧ್ಯಕ್ಷ ಶಿಳ್ಳಂಗೆರೆ ವೇಣುಗೋಪಾಲ್, ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ದೊಡ್ಡಕುರುಬರಹಳ್ಳಿ ಶಂಕರಪ್ಪ, ಮುಳಬಾಗಿಲು ನಗರಾಧ್ಯಕ್ಷ ಶ್ರೀನಾಥ್, ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷ ಕದಿರೇನಹಳ್ಳಿ ಶ್ರೀನಿವಾಸ್, ತೇರಹಳ್ಳಿ ಚಂದ್ರಪ್ಪ, ಕೋಲಾರ ಕಾರ್ಮಿಕ ಘಟಕದ ಜಬೀವುಲ್ಲಾ, ಅಬೀದ್ಖಾನ್, ಸೈಯದ್ ಫಿರ್ದೋಸ್ ಮುಂತಾದವರು ಭಾಗವಹಿಸಿದ್ದರು.
