ಪೊಳಲಿ : ಬಡಗಬೆಳ್ಳೂರು ಗ್ರಾಮದ ಕಂಡದಬೆಟ್ಟು ಎಂಬಲ್ಲಿನ ರಮೇಶ್ ಚೌಟರ ಮನೆಯಿಂದ ಕೆಲವು ದಿನಗಳ ಹಿಂದೆ ಎರಡು ದನ ಕಳವಾಗಿದ್ದು, ಬಡ ಕುಟುಂಬದ ಕಷ್ಟಕ್ಕೆ ಸ್ಪಂದಿಸಿದ ಶಾಸಕ ರಾಜೇಶ್ ನಾಯ್ಕ್ ಮಾನವೀಯ ನೆಲೆಯಲ್ಲಿ ಎರಡು ದನ ಒದಗಿಸಿ ಕೊಟ್ಟಿದ್ದಾರೆ.
ರಾತ್ರಿ ವೇಳೆ ಹಟ್ಟಿಯಲ್ಲಿದ್ದ ಒಂದು ದನ ಕಳವಾದ ಸೂಚನೆ ಸಿಕ್ಕದ ಕೂಡಲೇ ಎದ್ದು, ಹುಡುಕಾಟ ನಡೆಸಿದೆವು. ಎಲ್ಲೂ ದನ ಸಿಗದೆ ಬರಿಗೈಯಲ್ಲಿ ಮನೆಗೆ ಬಂದಾಗ, ಹಟ್ಟಿಯಲ್ಲಿದ್ದ ಮತ್ತೊಂದು ದನವೂ ಕಳವಾಗಿತ್ತು ಎಂದು ಚೌಟರು ಹೇಳುತ್ತಾರೆ.
ದನ ಸಾಕಿ ಜೀವನ ಸಾಗಿಸುತ್ತಿರುವ ಈ ಕುಟುಂಬಕ್ಕೆ ದನಗಳೆರಡು ಕಳವಾದಂದಿನಿಂದ ದಿಕ್ಕೇ ತೋಚದಂತಾಗಿತ್ತು. ಬಳಿಕ ಇವರು ಸ್ಥಳೀಯ ಚಂದ್ರಕಾಂತ್ ಶೆಟ್ಟಿ ಮತ್ತು ಕಿಶೋರ್ ಪುಲ್ಕೇರಿಯವರನ್ನು ಸಂಪರ್ಕಿಸಿ ತಮ್ಮ ಕಷ್ಟ ತೋಡಿಕೊಂಡರು. ಅವರು ನಡೆದ ಘಟನೆ ಶಾಸಕ ರಾಜೇಶ್ ನಾಯ್ಕ್ ಗಮನಕ್ಕೆ ತಂದರು. ಮನೆಗೆ ಭೇಟಿ ನೀಡಿದ ಶಾಸಕರು, ಕುಟುಂಬಕ್ಕೆ ನೀಡಿದ ಭರವಸೆಯಂತೆ ಎರಡು ದನ ಒದಗಿಸಿಕೊಟ್ಟಿದ್ದಾರೆ. ಈ ಮಧ್ಯೆ ಶಾಸಕರ ಮಧ್ಯಸ್ಥಿಕೆಯಲ್ಲಿ ಚೌಟರು ದನಗಳ್ಳರ ವಿರುದ್ಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
