ಮೂಡುಬಿದಿರೆ: ಕಳೆದ ಒಂದು ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟ ಪ್ರಕರಣಗಳು ಕಡಿಯಾಗಿವೆ. ಆದರೆ ಜಿಲ್ಲೆಯ ಉಸ್ತುವಾರಿ ಸಚಿವರ ಹಸ್ತಕ್ಷೇಪ, ಪೊಲೀಸರ ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರ ಮುಖೇನ ಮತ್ತೆ ಗೋ ಸಾಗಾಟ ಪ್ರಕರಣಗಳನ್ನು ಹೆಚ್ಚಿಸಿ, ಜಿಲ್ಲೆಯ ಶಾಂತಿ ಕದಡುವ ಪ್ರಯತ್ನಗಳಾಗುತ್ತಿವೆ. ಇದಕ್ಕೆ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಪೊಲೀಸ್ ಇಲಾಖೆ ನೇರ ಹೊಣೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಜೋಕಟ್ಟೆಯಲ್ಲಿ ನಡೆದಿರುವ ಪ್ರಕರಣದಲ್ಲಿ ಸಚಿವ ಯು.ಟಿ ಖಾದರ್ ದನಕಳ್ಳರಿಗೆ ಬೆಂಬಲ ನೀಡಿದ್ದಾರೆ. ಅಲ್ಲದೇ ಮೂಡುಬಿದಿರೆಯಲ್ಲಿ ನಡೆದ ಗೋ ಸಾಗಾಟ ಪ್ರಕರಣದಲ್ಲಿ ಆರೋಪಿಯನ್ನು ಬಜರಂಗದಳದ ಕಾರ್ಯಕರ್ತನೆಂದು ಬಿಂಬಿಸಿ ಸಂಘಟನೆಗೆ ಕೆಟ್ಟು ಹೆಸರು ತರುವ ಪ್ರಯತ್ನ ನಡೆದಿದೆ. ಆದರೆ ಆತ ಬಿಜೆಪಿಯಲ್ಲಿ ಆಗಲಿ, ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡ ವ್ಯಕ್ತಿಯಲ್ಲ. ಎರಡೂ ಪ್ರಕರಣಗಳಲ್ಲಿ ಪೊಲೀಸರು ಶಾಮೀಲಾಗಿದ್ದಾರೆ. ದೇಶದಲ್ಲಿ ಗೋ ಹತ್ಯೆ ಮಾಡದಂತೆ ಕಾನೂನು ಇದ್ದರೂ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಅಕ್ರಮ ಗೋ ಸಾಗಾಟಗಳು ನಿರಂತರವಾಗಿ ನಡೆಯುತ್ತಿದೆ. ಅಕ್ರಮ ಗೋ ಸಾಗಾಟ ತಡೆಯಲು ಯತ್ನಿಸಿದರೆ ಅಥವಾ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೇ `ನೈತಿಕ ಪೊಲೀಸ್ಗಿರಿ’ ಎಂದು ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಬಂಧಿಸಲಾಗುತ್ತಿದೆ. ಪೊಲೀಸರೇ ಅಕ್ರಮ ಗೋ ಸಾಗಾಟದಲ್ಲಿ ಪ್ರಕರಣಗಳಲ್ಲಿ ಶಾಮೀಲು ಆಗುತ್ತಿರುವ, ಅಪರಾಧವನ್ನು ತಡೆಯುವುದು ಹೇಗೆ? ಎಂದು ಪ್ರಶ್ನಿಸಿದರು.
ಕಮೀಷನರ್ ಕಚೇರಿ ಎದುರು ಪ್ರತಿಭಟನೆ:
ಮುಂದಿನ ದಿನಗಳಲ್ಲಿ ಅಕ್ರಮ ಗೋ ಸಾಗಾಟದ ವಿರುದ್ಧ ಉಸ್ತುವಾರಿ ಸಚಿವರು ಹಾಗೂ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗದಿದಲ್ಲಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಕಮೀಷನರ್ ಕಚೇರಿ ಎದುರು ಪ್ರತಿಭಟನೆ ಮಾಡುತ್ತೇವೆ ಎಂದು ಉಮಾನಾಥ ಕೋಟ್ಯಾನ್ ಎಚ್ಚರಿಕೆ ನೀಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ., ಬಿಜೆಪಿ ಮೂಡುಬಿದಿರೆ ಮಂಡಲ ಅಧ್ಯಕ್ಷ ಈಶ್ವರ ಕಟೀಲ್, ಪ್ರಧಾನ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಮಂಡಲ ಸ್ಲಂ ಮೋರ್ಚಾದ ಅಧ್ಯಕ್ಷ ನವೀನ್ ರಾಜ್, ಪುರಸಭಾ ಸದಸ್ಯರಾದ ಪ್ರಸಾದ್, ರಾಜೇಶ್ ನಾೈಕ್, ಮಾಜಿ ಸದಸ್ಯ ಲಕ್ಷ್ಮಣ್ ಪೂಜಾರಿ, ಬಿಜೆಪಿ ನಗರಶಕ್ತಿ ಕೇಂದ್ರ ಕಾರ್ಯದರ್ಶಿ ಹರೀಶ್ ಎಂ.ಕೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
