ಶ್ರೀನಗರ : 200ಕ್ಕೂ ಹೆಚ್ಚು ಶಸ್ತ್ರ ಸಜ್ಜಿತ ಉಗ್ರರು ಭಾರತದ ಗಡಿಯಲ್ಲಿ ಒಳ ನುಸುಳಲು ಸಂಚು ರೂಪಿಸಿದ್ದು, ಗಡಿ ಭಾಗದಲ್ಲಿ ಬೀಡು ಬಿಟ್ಟಿದ್ದಾರೆ ಎಂಬ ಆತಂಕಕಾರಿ ಮಾಹಿತಿಯನ್ನು ಸೇನಾ ಮೂಲಗಳು ಹೊರಹಾಕಿವೆ.

ಜಮ್ಮು ಕಾಶ್ಮೀರದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯ ಲಾಭ ಪಡೆದಿರುವ ಉಗ್ರರು ಇದೇ ಸಮಯವನ್ನುಪಯೋಗಿಸಿಕೊಂಡು ಭಾರತದೊಳಗೆ ಒಳ ನುಸುಳಲು ಶಸ್ತ್ರ ಸಜ್ಜಿತರಾಗಿ ಗಡಿಯುದ್ದಕ್ಕೂ ಕಾಯುತ್ತಿದ್ದಾರೆ ಎಂದು ಲೆಫ್ಟಿನೆಂಟ್ ಜನರಲ್ ಸುಬ್ರತೊ ಸಹಾ ತಿಳಿಸಿದ್ದಾರೆ.
ಕಾಶ್ಮೀರದಲ್ಲಿ ಉಂಟಾಗಿರುವ ಪ್ರವಾಹದಿಂದಾಗಿ ಹೆಚ್ಚಿನ ಸೈನಿಕರು ಸಂತ್ರಸ್ತರನ್ನು ರಕ್ಷಿಸಲು ಮುಂದಾಗಿದ್ದರು. ಇದರಿಂದಾಗಿ ಗಡಿ ಭಾಗದಲ್ಲಿ ಸೈನಿಕರು ಕಡಿಮೆಯಾಗಿರುವುದನ್ನು ಕಾಯುತ್ತಿದ್ದ 200ಕ್ಕೂ ಹೆಚ್ಚು ಉಗ್ರರು ಭಾರತದೊಳಗೆ ನುಸುಳಲು ಯತ್ನಿಸಿದ್ದಾರೆ.
ಉಗ್ರರು ಜಾಗೃತರಾಗಿದ್ದು, ಯಾವುದೇ ಕ್ಷಣದಲ್ಲಿ ದಾಳಿ ಮಾಡಬಹುದಾದ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿ ಬಿಗಿಭದ್ರತೆ ಕಲ್ಪಿಸಲಾಗಿದೆ ಎಂದು ಸೇನೆ ತಿಳಿಸಿದೆ.

