ಬಂಟ್ವಾಳ,: ಬಂಟ್ವಾಳ ತಾಲೂಕಿನಲ್ಲಿ ಹಲ್ಲೆ, ಕೊಲೆ ಯತ್ನ ಹಾಗೂ ಬಸ್ಗಳಿಗೆ ಕಲ್ಲು ತೂರಾಟ ನಡೆಸುವ ಮೂಲಕ ಶಾಂತಿ ಭಂಗಕ್ಕೆ ಸಂಚು ರೂಪಿಸುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಎಸ್ಡಿಪಿಐ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಗುರುವಾರ ಬಂಟ್ವಾಳ ಎಎಸ್ಪಿ ಸೈದುಲು ಅಡಾವತ್ ಅವರಿಗೆ ಮನವಿ ಸಲ್ಲಿಸಲಾಯಿತು.

ಕಳೆದ ಕೆಲವು ದಿನಗಳಿಂದ ಬಂಟ್ವಾಳ ತಾಲೂಕಿನಲ್ಲಿ ದುಷ್ಕರ್ಮಿಗಳು ಶಾಂತಿ ಕದಡುವ ಪ್ರಯತ್ನ ನಡೆಸಿತ್ತಿದ್ದಾರೆ. ಸಜಿಪಮೂಡ ಗ್ರಾಮದ ಕಂದೂರು ಬಳಿ ಅಲಾಲತ್ ಎಂಬ ಯುವಕನ ಹತ್ಯಗೆ ಯತ್ನ, ಕನ್ಯಾನ ಗ್ರಾಮದ ಶಿರಂಕಲ್ಲು ಎಂಬಲ್ಲಿ ಅಬ್ದುಲ್ ಮುಸ್ತಾಕ್ ಎಂಬ ವಿದ್ಯಾರ್ಥಿಯ ಕೊಲೆಯತ್ನ, ಕರ್ನಾಟಕ ಕೇರಳ ಗಡಿ ಭಾಗದ ಅಡ್ಯನಡ್ಕದಲ್ಲಿ ಗೋವಿನ ವಿಚಾರದಲ್ಲಿ ಕೊಲೆಯತ್ನ, ದರೋಡೆ, ಹಲ್ಲೆ ಪ್ರಕರಣಗಳು ನಡೆದಿರುತ್ತದೆ. ಇದಲ್ಲದೆ ಜೂ. ೨೫ರಂದು ಬಜರಂಗದಳ ಸಂಘಟನೆಯ ಹೆಸರಿನಲ್ಲಿ ಸಾಮಾಜಿಕ ಜಾಲಾತಾಣದಲ್ಲಿ ಬಂದ್ಗೆ ಕರೆ ನೀಡಿ, ಜೂ. ೨೬ರಂದು ತಾಲೂಕಿನ ವಿವಿಧ ಕಡೆ ಬಸ್ಗಳಿಗೆ ಕಲ್ಲು ತೂರಾಟ ನಡೆಸಿ ಅಶಾಂತಿಯ ವಾತಾವರಣ ಸೃಷ್ಟಿಸಲಾಗಿತ್ತು. ಪೋಲೀಸ್ ಇಲಾಖೆಯ ದಕ್ಷ ಅಧಿಕಾರಿಗಳ ಕಾರ್ಯ ವೈಖರಿಯಿಂದ ಹೆಚ್ಚಿನ ಅನಾಹುತಗಳನ್ನು ತಪ್ಪಿಸಿರುವುದು ಪ್ರಶಂಸನೀಯ ಎಂದು ಮನವಿಯಲ್ಲಿ ತಿಳಿಸಲಾಗಿದೆ.

೨೦೧೭ರಲ್ಲಿ ಇಂತಹ ಹಲ್ಲೆ, ಕೊಲೆಯತ್ನ ಪ್ರಕರಣಗಳು ನಡೆದು ಕೋಮು ಗಲಭೆ ಉಂಟಾಗಿ ಇಬ್ಬರ ಹತ್ಯೆಯಾಗುವ ಮೂಲಕ ಸಮಾಜದಲ್ಲಿ ಹಲವಾರು ಜನರ ಆಸ್ತಿ-ಪಾಸ್ತಿಗಳಿಗೆ ನಷ್ಟ ಉಂಟಾಗಿ ತಾಲೂಕಿನಲ್ಲಿ ೬೨ ದಿನಗಳ ಕಾಲ ಸೆಕ್ಷನ್ ಕೂಡಾ ಜಾರಿಯಲ್ಲಿತ್ತು. ಪೊಲೀಸ್ ಇಲಾಖೆಯು ಇದನ್ನೆಲ್ಲಾ ಮನಗಂಡು ಈ ಎಲ್ಲ ಪ್ರಕರಣಗಳಲ್ಲಿರುವಂತಹ ಆರೋಪಿಗಳನ್ನು ಬಂಧಿಸಿ, ಸಮಾಜದಲ್ಲಿ ಶಾಂತಿಯ ವಾತಾವರಣವನ್ನು ನಿರ್ಮಿಸಬೇಕಾಗಿ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಎಸ್ಡಿಪಿಐ ಬಂಟ್ವಾಳ ಕ್ಷೇತ್ರಾಧ್ಯಕ್ಷ ಯೂಸುಫ್ ಅಲಡ್ಕ, ಉಪಾಧ್ಯಕ್ಷ ಕಲಂದರ್ ಪರ್ತಿಪ್ಪಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಎಸ್.ಎಚ್, ಬಂಟ್ವಾಳ ಪುರಸಭಾ ಸದಸ್ಯ ಮೂನಿಶ್ ಅಲಿ, ಇದ್ರೀಸ್ ಪಿ.ಜೆ ಉಪಸ್ಥಿತರಿದ್ದರು.
