ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ಅಡ್ಡೂರು ಕುಚ್ಚಿಗುಡ್ಡೆ-ಟಿಬೆಟ್ ಎಂಬಲ್ಲಿ 2019-20ರ ಸಾಲಿನ 14ನೇ ಹಣಕಾಸು ಯೋಜನೆಯ ಅನುದಾನದಡಿ ನಿರ್ಮಿಸಲಾದ ಕೊಳವೆ ನೀರು ಶುದ್ಧೀಕರಣ ಘಟಕವನ್ನು ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಯು ಪಿ ಇಬ್ರಾಹಿಂ ಪರಿಶೀಲಿಸಿ, ನಾಗರಿಕ ಸೇವೆಗೆ ಹಸ್ತಾಂತರಿಸಿದರು.
ಅಡ್ಡೂರು ಪರಿಸರದಲ್ಲಿ ಕೊಳವೆ ನೀರು ಶುದ್ಧೀಕರಣ ಘಟಕ ಸ್ಥಾಪಿಸಬೇಕೆಂಬುದು ಸ್ಥಳೀಯರ ಬಹುದಿನಗಳ ಬೇಡಿಕೆಯಾಗಿದ್ದು, ಈಗ ಅನಪ್ಠಾನಗೊಂಡಿದೆ. ಸ್ಥಳೀಯ ಕೈಯಲ್ಲಿ ಇದರ ಸದುಪಯೋಗದ ಹೊಣೆಗಾರಿಗೆ ಇದೆ ಎಂದು ಇಬ್ರಾಹಿಂ ತಿಳಿಸಿದರು.
ಕಾಂಜಿಲಕೋಡಿಯಲ್ಲೂ ಇದೇ ರೀತಿಯ ಮತ್ತೊಂದು ಘಟಕ ಸ್ಥಾಪಿಸುವ ಗುರಿ ಹೊಂದಲಾಗಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರಿಗೆ ಪರಿಶುದ್ಧವಾದ ಕುಡಿಯುವ ನೀರು ಪೂರೈಸುವ ಪ್ರಯತ್ನ ಇದಾಗಿದೆ ಎಂದು ಗುರುಪುರ ಗ್ರಾಪಂ ಪಿಡಿಒ ಅಬೂಬಕ್ಕರ್ ತಿಳಿಸಿದರು.
ಭವಿಷ್ಯದಲ್ಲಿ ಗುರುಪುರ ಗ್ರಾಪಂ ವ್ಯಾಪ್ತಿಯ ಪ್ರತಿಯೊಂದು ಮನೆಯಲ್ಲೂ ಸ್ವಚ್ಚತೆ ಮತ್ತು ಆರೋಗ್ಯದ ದೃಷ್ಟಿಯಿಂದ ಎಸ್ಟಿಪಿ ಟ್ಯಾಂಕ್ ಅಳವಡಿಕೆ ಹಾಗೂ ನೀರಿನ ಕೊರತೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಮಳೆಕೊಯ್ಲಿಗೆ ಒತ್ತು ನೀಡುವಂತೆ ನಾಗರಿಕರಿಗೆ ಪ್ರೇರೇಪಿಸಲಾಗುವುದು ಎಂದವರು ಹೇಳಿದರು.

