ಬುದ್ಧಿಜೀವಿ ಅನಿಸಿಕೊಂಡ ಮಾನವ ವಿವೇಚನಾ ಶೂನ್ಯನಾಗಿರುವುದರಿಂದ ಇಂದು ಪರಿಸರ ವಿನಾಶವಾಗುತ್ತಿದೆ. ಸ್ವಚ್ಛ ಗಾಳಿ ಸಮೃದ್ಧ ಪರಿಸರಕ್ಕಾಗಿ ಗಿಡ ಮರಗಳನ್ನು ನೆಟ್ಟು ಬೆಳೆಸುವುದಲ್ಲದೇ ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಅನಿವಾರ್ಯ ಎಂದು ಪರಿಸರ ಪ್ರೇಮಿ, ನಿವೃತ್ತ ಉಪನ್ಯಾಸಕ ಶ್ರೀ ರಾಜಮಣಿ ರಾಮಕುಂಜ ಹೇಳಿದರು.
ಅವರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆ ಶಂಭೂರು ಇಲ್ಲಿನ ಚಿಗುರು ಪರಿಸರ ಸಂಘ ಹಾಗೂ ಜೇಸಿಐ ಜೋಡುಮಾರ್ಗ ನೇತ್ರಾವತಿ, ಜ್ಯೂನಿಯರ್ ಜೇಸಿ ವಿಭಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ದಲ್ಲಿ ಹಣ್ಣು ಮತ್ತು ಔಷಧೀಯ ಸಸ್ಯಗಳನ್ನು ನೆಟ್ಟು ವಾಯು ಪ್ರದೂಷಣೆ ಮತ್ತು ಕಸ ನಿರ್ವಹಣೆ ಬಗ್ಗೆ ಮಾಹಿತಿ ನೀಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಶಿಕ್ಷಕರಾದ ಸದಾಶಿವ ನಾಯಕ್ ವಹಿಸಿದ್ದರು. ಜೇಸಿ ಉಪಾಧ್ಯಕ್ಷರಾದ ಹರಿಪ್ರಸಾದ್ ಕುಲಾಲ್, ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಚಿನ್ನಪ್ಪ ಜಾಲ್ಸೂರು, ಶಿಕ್ಷಕರಾದ ವರಮಹಾಲಕ್ಷ್ಮೀ, ಪ್ರಕಾಶ್ ಸಜಿಪ, ಹರೀಶ ದೇವಂದಬೆಟ್ಟು, ಜೇಜೇಸಿ ಅಧ್ಯಕ್ಷ ರೋನಿತ್ ಬಿ.ಜಿ, ಪರಿಸರ ಸಂಘದ ಅಧ್ಯಕ್ಷ ನಮನ್ ಕುಮಾರ್ ಉಪಸ್ಥಿತರಿದ್ದರು. ವಿಜ್ಞಾನ ಶಿಕ್ಷಕರಾದ ಭಾರತಿ ಹರೀಶ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ವಿಶ್ಮಿತಾ ವೇಗಸ್ ಸ್ವಾಗತಿಸಿ, ಪ್ರತೀಕ್ಷಾ ವಂದಿಸಿದರು. ಸುರಕ್ಷಾ ಕಾರ್ಯಕ್ರಮ ನಿರ್ವಹಿಸಿದರು.
