ಬಂಟ್ವಾಳ : ಪವಿತ್ರ ರಂಝಾನ್ ತಿಂಗಳಲ್ಲಿ ಮುಸ್ಲಿಮರು ಪಾಲಿಸಿದ ಧಾರ್ಮಿಕ ಪ್ರಜ್ಞೆ ಹಾಗೂ ದೇವಭಯವನ್ನು ವರ್ಷದ ಇತರ ಹನ್ನೊಂದು ತಿಂಗಳಲ್ಲೂ ಪಾಲಿಸಿಕೊಂಡು ಬರುವ ಮೂಲಕ ಇಹ-ಪರ ಮೋಕ್ಷ ಸಂಪಾದನೆಗೆ ಮುಂದಾಗಬೇಕು ಎಂದು ಪಾಣೆಮಂಗಳೂರು ಸಮೀಪದ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಹಾಜಿ ಬಿ.ಎಚ್. ಅಬೂಸ್ವಾಲಿಹ್ ಉಸ್ತಾದ್ ಕರೆ ನೀಡಿದರು.

ಬುಧವಾರ ಮಸೀದಿಯಲ್ಲಿ ನಡೆದ ಈದುಲ್ ಫಿತ್ರ್ ಹಬ್ಬದ ವಿಶೇಷ ಪ್ರಾರ್ಥನೆ ಹಾಗೂ ಖುತುಬಾಗೆ ನೇತೃತ್ವ ನೀಡಿದ ಬಳಿಕ ಸಂದೇಶ ನೀಡಿದ ಅವರು ಮನಸ್ಸು ಹಾಗೂ ದೇಹ ನಿಯಂತ್ರಣ ಕಾಪಾಡಲು ಪವಿತ್ರ ರಮಳಾನ್ ತಿಂಗಳು ಮುಸ್ಲಿಮರ ಪಾಲಿಗೆ ಅತ್ಯುತ್ತಮ ತರಬೇತಿ ನೀಡಿದ್ದು, ಈ ತಿಂಗಳಲ್ಲಿ ಅನುಸರಿಸಿದ ದೈವಭಕ್ತಿ ಹಾಗೂ ಮಾನವೀಯ ಗುಣಗಳನ್ನು ಸದಾ ರೂಢಿಸಿಕೊಂಡು ಬಂದಾಗ ಜೀವನದ ಸಕಲ ಜಂಜಾಟಗಳಿಗೂ ಪರಿಹಾರವಾಗುವುದರ ಜೊತೆಗೆ ಸಾಮುದಾಯಿಕ ಹಾಗೂ ಸಾಮಾಜಿಕ ಸಂಕಷ್ಟಗಳಿಗೂ ಮುಕ್ತಿ ದೊರೆಯಬಲ್ಲುದು ಎಂದರು.

ಪವಿತ್ರ ರಂಝಾನಿನಲ್ಲಿ ಮುಸ್ಲಿಮರು ಹಸಿವು ಹಾಗೂ ದಾನ-ಧರ್ಮಗಳ ಮಹತ್ವವನ್ನು ಚೆನ್ನಾಗಿ ಅರಿತುಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಬಂದಿದ್ದು, ಇದನ್ನು ವರ್ಷಪೂರ್ತಿ ಅಳವಡಿಸಿಕೊಂಡಾಗ ಸಮಾಜದ ಬಡ-ಬಗ್ಗರ ಪಾಲಿಗೆ ವರದಾನವಾದೀತು ಎಂದ ಬಿ.ಎಚ್. ಉಸ್ತಾದ್ ಈದುಲ್ ಫಿತ್ರ ಹಬ್ಬ ರಂಝಾನ್ ತಿಂಗಳ ಅಂತ್ಯವೇ ಹೊರತು ಸತ್ಕರ್ಮಗಳಿಗೆ ಹಾಡುವ ವಿದಾಯ ದಿನವಲ್ಲ ಎಂಬುದನ್ನು ಪ್ರತಿಯೊಬ್ಬರೂ ಮನಗಂಡು ಜೀವನದಲ್ಲಿ ಸದಾ ಸತ್ಕರ್ಮಗಳ ಬಗ್ಗೆ ಹೆಚ್ಚಿನ ಜಾಗೃತಿಯನ್ನು ಕಂಡುಕೊಳ್ಳಬೇಕೆಂದು ಕರೆ ನೀಡಿದರು.

ಈದುಲ್ ಫಿತ್ರ ವಿಶೇಷ ಪ್ರಾರ್ಥನೆಯ ಬಳಿಕ ಮುಸ್ಲಿಮರು ಪರಸ್ಪರ ಹಸ್ತಲಾಘವ, ಆಲಿಂಗನ ಮಾಡುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮುಂಜಾನೆಯೇ ಹೊಸ ವಸ್ತ್ರಗಳನ್ನು ಧರಿಸಿ ಪುರುಷರು ಹಾಗೂ ಮಕ್ಕಳು ಮಸೀದಿಗೆ ಬಂದು ದಿನದ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಬಳಿಕ ದಾನ ಧರ್ಮಗಳನ್ನು ನಡೆಸುವ ಮೂಲಕ ಕೃತಾರ್ಥರಾದರು.


