ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈ ಅವರು ಸೋಮವಾರ ಸಂಜೆಯ ವೇಳೆ ಹಾಗೆ ಸುಮ್ಮನೆ ಬಿ.ಸಿ.ರೋಡಿನ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಸಂಜೆಯ ಉಪಾಹಾರ ಕೇಸರಿ ಬಾತ್ನ ರುಚಿ ಸವಿದರು.
ಈ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್ ಗೆ ಉಪಹಾರ ಸೇವನೆಗೆ ಅಗಮಿಸಿದ್ದ ಗ್ರಾಹಕರು ತಿಂಡಿಯ ಜೊತೆಗೆ ಚಹಾ ಕೂಡಾ ಸಿಗುವಂತೆ ಮಾಡಬೇಕು ಎಂದು ರೈ ಅವರಲ್ಲಿ ಕೇಳಿಕೊಂಡರು.
ಇವರ ಮನವಿಗೆ ಸ್ಪಂದಿಸಿದ ರಮಾನಾಥ ರೈ ಅವರು ಈ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚಿಸುವ ಬಗ್ಗೆ ಭರವಸೆ ನೀಡಿದರು. ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ಪ್ರಮುಖರಾದ ಸದಾನಂದ ಶೆಟ್ಟಿ ಪಂಜಿಕಲ್ಲು, ಚಿತ್ತರಂಜನ್ ಶೆಟ್ಟಿ, ಸುರೇಶ್ ಜೊಹರಾ, ಮೋಹನ್ ಶೆಟ್ಟಿ, ಸಂತೋಷ್ ಪೂಜಾರಿ, ನಾಗೇಶ್, ಮತ್ತಿತರರು ಮಾಜಿ ಸಚಿವರಿಗೆ ಸಾಥ್ ನೀಡಿದರು.
