ಮೂಡುಬಿದಿರೆ: ನೆಲ್ಲಿಕಾರಿನ ಜೈನ್ ಪೇಟೆ ನಿವಾಸಿ ಹಿರಿಯ ಉದ್ಯಮಿ, ಪ್ರಗತಿಪರ ಕೃಷಿಕ ಎನ್. ಜಿನದತ್ತ ಶೆಟ್ಟಿ (94ವ) ಶನಿವಾರ ನಿಧನ ಹೊಂದಿದರು.

ಅವರು ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ನೆಲ್ಲಿಕಾರಿನಲ್ಲಿ ಸರ್ಕಾರಿ ಶಾಲೆ, ಆರೋಗ್ಯ ಕೇಂದ್ರದ ಅಭಿವೃದ್ಧಿಯಲ್ಲಿ ಗಮನಾರ್ಹ ಕೊಡುಗೆ ಸಲ್ಲಿಸಿದ್ದ ಜಿನದತ್ತ ಅವರು ದಾನಿಯಾಗಿ, ಧಾರ್ಮಿಕ ಸಹಿತ ನೆಲ್ಲಿಕಾರಿನ ಪ್ರಗತಿಯಲ್ಲಿ ಸಕ್ರಿಯರಾಗಿದ್ದರು. ಸೂರಾಲು ಅರಮನೆಯ ವಸಂತ ಕುಮಾರಿಯವರನ್ನು ವರಿಸಿ ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಕಂಡಿದ್ದ ಮತ್ತು ರಾಷ್ಟ್ರವ್ಯಾಪಿ ಜೈನ ತೀರ್ಥ ಕ್ಷೇತ್ರಯಾತ್ರೆ, ಸಮ್ಮೇದ ಶಿಖರ್ಜಿ ಆರಾಧನೆ ನಡೆಸಿದ್ದ ಜಿನದತ್ತ ಅವರಿಗೆ ಮೂಡುಬಿದಿರೆಯ ಭಟ್ಟಾರಕ ಶ್ರೀಗಳವರು ಆದರ್ಶ ದಂಪತಿ ಉಪಾದಿಯೊಂದಿಗೆ ಗೌರವಿಸಿದ್ದರು.
