ಕುಪ್ಪೆಪದವು: ಅಕ್ರಮವಾಗಿ ಜಾನುವಾರು ಸಾಗಾಟ ನಡೆಸುತ್ತಿದ್ದ ಪಿಕ್ಅಪ್ ವಾಹನವನ್ನು ಭಜರಂಗದಳದ ಕಾರ್ಯಕರ್ತರು ಎಡಪದವು ಜಂಕ್ಷನ್ ಬಳಿ ಗುರಾವರ ರಾತ್ರಿ 8ರ ಸುಮಾರಿಗೆ ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪಿಕ್ಅಪ್ ಸಮೇತ ಒಂದು ಜಾನುವಾರನ್ನು ವಶಕ್ಕೆ ಪಡೆದಿದ್ದಾರೆ.
ವಾಹನದಲ್ಲಿ ಇಬ್ಬರಿದ್ದು, ಕಾರ್ಯಕರ್ತರನ್ನು ಕಂಡು ಸಮೀಪದ ಮಸೀದಿ ಸಮೀಪ ತೆರಳಿ ತಪ್ಪಿಸಿಕೊಂಡಿದ್ದಾರೆಂದು ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ. ಪೂಪಾಡಿಕಲ್ಲು ಅಥವಾ ಕುಪ್ಪೆಪದವು ಸಮೀಪದಿಂದ ವೇಗವಾಗಿ ಬರುತ್ತಿದ್ದ ಪಿಕ್ಅಪ್ ವಾಹನ ಯಾವುದಕ್ಕೂ ಸೈಡ್ ಕೊಡದೆ ಕರ್ಕಶ ರೀತಿಯಲ್ಲಿ ಹಾರ್ನ್ ಹಾಕಿ ತೆರಳುತ್ತಿತ್ತು. ಇದನ್ನು ಗಮನಿಸಿ ಬೆನ್ನತ್ತಿದ್ದ ಕಾರ್ಯಕರ್ತರಿಗೆ ಜಾನುವಾರಿನ ಸೆಗಣಿ ವಾಸನೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಎಡಪದವು ಜಂಕ್ಷನ್ ಬಳಿ ಅಡ್ಡಹಾಕಿ ನೋಡಿದಾಗ ತರ್ಪಾಲ್ ಒಳಗಡೆ ಹಸುವನ್ನು ಕಟ್ಟಿ ಹಾಕಿ ಸಾಗಾಟ ನಡೆಸುತ್ತಿರುವುದು ಪತ್ತೆಯಾಗಿದೆ. ಆದರೆ ಆರೋಪಿಗಳು ಪರಾರಿಯಾಗಿದ್ದಾರೆ.
ಈ ಬಗ್ಗೆ ಬಜಪೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಎಸಿಪಿ ಶ್ರೀನಿವಾಸ ಗೌಡ, ಹನುಮಂತರಾಯ ಡಿಸಿಪಿ ನೇತೃತ್ವದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪಿಕ್ಅಪ್ ವಾಹನ ವಶಪಡಿಸಿ, ಜಾನುವಾರನ್ನು ಮರವೂರಿನ ಗೋಶಾಲೆಗೆ ಒಪ್ಪಿಸಲಾಗಿದೆ. ಬಜಪೆ ಪೊಲೀಸರು ತನಿಖೆ ಕೈಗೊಂಡಿದ್ದು, ಪಿಕ್ಅಪ್ ವಾಹನದ ನಂಬರ್ ಆಧಾರದಲ್ಲಿ ಆರೋಪಿಗಳನ್ನು ವಶಪಡಿಸಲಿದ್ದಾರೆ.
