ಬಂಟ್ವಾಳ: ಬಂಟ್ವಾಳ ತಾಲೂಕಿನ ಕಲ್ಲಡ್ಕ- ಮಾಣಿ ರಾಷ್ಟ್ರೀಯ ಹೆದ್ದಾರಿ ನಡುವಿನ ಸೂರಿಕುಮೇರು ಸಮೀಪದ ಬರಿಮಾರು ಕಡವಿನಬಳಿ ಎಂಬಲ್ಲಿ ಶನಿವಾರ ಸಂಜೆ ನಡೆದ ಘಟನೆಯಲ್ಲಿ ಸ್ನಾನಕ್ಕಿಳಿದ ಕುಂಬಳೆ ಸಮೀಪದ ತಂಡವೊಂದರ ಪೈಕಿ ಇಬ್ಬರು ಮೃತಪಟ್ಟಿದ್ದಾರೆ.
ಬರಿಮಾರು ಗ್ರಾಮದ ಸಂಜೀವ್ ಭೋವಿ ಎಂಬುವರ ಮಗನ ಮದುವೆಗೆ ಆಗಮಿಸಿದ್ದ ಅವರ ದೂರದ ಸಂಬಂಧಿಯಾಗಿರುವ ಕೇರಳದ ಕುಂಬಳೆಯ ಕೊಯಿಪ್ಪಾಡಿಯ ಅಜಿತ್ ಕುಮಾರ್ (40) ಹಾಗೂ ಕುಂಬಳೆ ನಾಯ್ಕಾಪು ನಿವಾಸಿ ಮನೀಷ್ (14) ಮೃತಪಟ್ಟವರು. ಇನ್ನೋರ್ವ ಯಕ್ಷಿತ್ (13) ಎಂಬಾತ ಅಪಾಯದಿಂದ ಪಾರಾಗಿದ್ದು, ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಜೀವ ಬೋವಿ ಅವರ ಮನೆಗೆ ಬಂದಿದ್ದ ಕುಂಬಳೆಯಲ್ಲಿ ಕಲಾವಿದರ ಸಂಘ ನಡೆಸುತ್ತಿದ್ದ ಅಜಿತ್ ತನ್ನೊಂದಿಗೆ ಏಳು ಮಂದಿ ಮಕ್ಕಳನ್ನು ಕರೆದುಕೊಂಡು ಮದುವೆ ಸಂಭ್ರಮಕ್ಕೆ ಬಂದಿದ್ದು, ಶನಿವಾರ ಸಂಜೆ ನೇತ್ರಾವತಿ ಬಳಿಯಲ್ಲಿ ಈಜಲು ತೆರಳಿದ್ದಾರೆ.
ಮನೀಷ್ ಮತ್ತು ರಕ್ಷಿತ ಮುಳುಗುವುದು ಕಂಡು ಅಜೀತ್ ರಕ್ಷಣೆಗೆ ಧುಮುಕಿದ್ದಾರೆ. ಇದನ್ನು ನೋಡಿ ಸ್ಥಳೀಯ ಈಜುಗಾರ ಕೇಶವ ಬರಿಮಾರು ಸಹಿತ ಸ್ಥಳೀಯರು ನೀರಿಗಿಳಿದು ಯಕ್ಷಿ ತ್ ನನ್ನು ರಕ್ಷಿಸಿದರೂ ಅಜಿತ್ ಮತ್ತು ಮನೀಷ್ ಅವರನ್ನು ಮೇಲಕ್ಕೆತ್ತುವ ವೇಳೆ ಅವರು ಚಿಂತಾಜನಕ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂಮೃತಪಟ್ಟಿರುವುದಾಗಿ ಘೋಷಿಸಲಾಯಿತು.
ಸುದ್ದಿ ತಿಳಿದ ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ ಐ ಪ್ರಸನ್ನ ಮತ್ತವರ ಸಿಬಂದಿಗಳು ಸ್ಥಳಕ್ಕಾಗಮಿಸಿ ಮುಂದಿನ ಕ್ರಮ ಕೈಗೊಂಡರು. ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು,ಮುಂದಿನ ತನಿಖೆ ನಡೆಯುತ್ತಿದೆ.ಸ್ಥಳಕ್ಕೆ ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಗ್ರಾಮ ಲೆಕ್ಕಾಧಿಕಾರಿ ಜನಾರ್ಧನ್, ಪ್ರದೀಪ್ ತಾಲೂಕು ಕಚೇರಿ ಸಿಬಂದಿ ಸದಾಶಿವ ಕೈಕಂಬ ಸ್ಥಳ ಪರಿಶೀಲನೆ ನಡೆಸಿದರು
