ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಇಲ್ಲಿನ ಅಜಿಲಮೊಗರು ಮತ್ತು ಕಡೇಶ್ಯಾಲ್ಯ ಪ್ರದೇಶದ ಎರಡು ಪುರಾತನ ಮತ್ತು ಕಾರಣಿಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳ ನಡುವೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯದ ಕೊಂಡಿಯಾಗಿ ನೇತ್ರಾವತಿ ನದಿಯಲ್ಲಿ ನಿರ್ಮಿಸಲು ಉದ್ದೇಶಿಸಿದ ಮಹತ್ವಾಕಾಂಕ್ಷೆಯ ‘ಸೌಹಾರ್ದ ಸೇತುವೆ’ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಒಟ್ಟು 312 ಮೀ. ನೇತ್ರಾವತಿ ನದಿಗೆ ಅಡ್ಡವಾಗಿ ನಿರ್ಮಿಸಲಾಗುವ ಈ ಸೌಹಾರ್ದ ಸೇತುವೆಗೆ ಕಳೆದ ವರ್ಷ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಂಕುಸ್ಥಾಪನೆ ನೆರವೇರಿಸಿದ್ದರು.22btl-Sethuve

ಕಳೆದ ವರ್ಷ ಅ. 22ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗಾಗಿ ಬಿ.ಸಿ.ರೋಡಿಗೆ ಆಗಮಿಸಿದ್ದ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 2017ರ ಬಿ.ಸಿ.ರೋಡಿನಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು. ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗಾಗಿ ಬಿ.ಸಿ.ರೋಡಿಗೆ ಆಗಮಿಸಿದ್ದ ಅಂದಿನ ಮುಖ್ಯಮಂತ್ರಿ ಕೂಡಾ ಶಿಲಾನ್ಯಾಸ ನೆರವೇರಿಸಿದ್ದರು. ಇದಕ್ಕೂ ಮೊದಲು ಅಂದಿನ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ನಾಗರಾಜ ಶೆಟ್ಟಿ ಅವರು ಈ ಸೇತುವೆ ನಿರ್ಮಿಸುವುದಾಗಿ ಭರವಸೆ ನೀಡಿದ್ದರು.22btl-Ajilamogaru

ಪ್ರಸಕ್ತ ಈ ಯೋಜನೆಗೆ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ(ಕೆಆರ್‍ಡಿಸಿಎಲ್) ವತಿಯಿಂದ ರೂ 19.84 ಕೋಟಿ ಮೊತ್ತದ ಅನುದಾನ ಮಂಜೂರಾಗಿದೆ. ಈ ಸೇತುವೆ ನಿರ್ಮಾಣಗೊಂಡರೆ ತಾಲ್ಲೂಕಿನ ನಾವೂರು, ಮಣಿನಾಲ್ಕೂರು, ಸರಪಾಡಿ, ಕಡೇಶ್ವಾಲ್ಯ, ಮಾಣಿ, ಬುಡೋಳಿ, ಬರಿಮಾರು, ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ, ಬೆಳ್ತಂಗಡಿ ತಾಲ್ಲೂಕಿನ ತೆಕ್ಕಾರು, ಬಾರ್ಯ, ತಣ್ಣೀರುಪಂತ ಮತ್ತಿತರ ಪ್ರದೇಶಗಳಿಗೆ ತ್ವರಿತವಾಗಿ ತೆರಳಲು ಅನುಕೂಲಕರವಾಗಲಿದೆ.
ಪುರಾತನ ಧಾರ್ಮಿಕ ಕ್ಷೇತ್ರ:
ಜಿಲ್ಲೆಯ ಜೀವನದಿಯಾಗಿ ಗುರುತಿಸಿಕೊಂಡಿರುವ ನೇತ್ರಾವತಿ ನದಿಯ ಒಂದು ಬದಿ ಪುರಾತನ ಮತ್ತು ಕಾರಣಿಕ ಪ್ರಸಿದ್ಧ ಲಕ್ಷ್ಮೀನರಸಿಂಹ ದೇವಸ್ಥಾನ ಇದ್ದರೆ, ಇನ್ನೊಂದು ಬದಿ ಪುರಾತನ ಮತ್ತು ಸೌಹಾರ್ದತೆ ಹಿನ್ನೆಲೆ ಹೊಂದಿರುವ ಅಜಿಲಮೊಗರು ಜುಮ್ಮಾ ಮಸೀದಿ ಇದೆ. ಇದೀಗ ಅಜಿಲಮೊಗರು ಮಸೀದಿಗೆ ಬಂಟ್ವಾಳ-ಮಣಿಹಳ್ಳ ರಾಷ್ಟ್ರೀಯ ಹೆದ್ದಾರಿಯಿಂದ ಸರಪಾಡಿ-ಅಲ್ಲಿಪಾದೆ ರಸ್ತೆ ಮೂಲಕ ಸಾಗಬೇಕು. ಕಡೇಶ್ವಾಲ್ಯ ಕ್ಷೇತ್ರಕ್ಕೆ ಬಿ.ಸಿ.ರೋಡು-ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಗಡಿಯಾರ ರಸ್ತೆ ಮೂಲಕ ಸುತ್ತು ಬಳಸಿ ಪ್ರಯಾಣಿಸಬೇಕು.

ಚೆನ್ನೈನ ಎಸ್ಪಿಎಲ್ ಇನ್‍ಫ್ರಾಸ್ಟ್ರಕ್ಚರ್ ಕಂಪೆನಿ ಸೇತುವೆ ನಿರ್ಮಾಣದ ಗುತ್ತಿಗೆ ವಹಿಸಿಕೊಂಡಿದ್ದು, ಮುಂದಿನ 2ವರ್ಷಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ತಿಳಿಸಲಾಗಿದೆ. ಒಟ್ಟು 312 ಮೀಟರ್ ಉದ್ದ ಮತ್ತು 10.50 ಮೀ.ಅಗಲದ ಸೇತುವೆ ಜೊತೆಗೆ ಒಟ್ಟು 378 ಮೀ.ಉದ್ದದ ಸಂಪರ್ಕ ರಸ್ತೆಯೂ ನಿರ್ಮಾಣಗೊಳ್ಳಲಿದೆ ಎಂದು ವಾಗಲಿದೆ ಎಂದು ಹಾಸನ ವಿಭಾಗ ಕೆಆರ್‍ಡಿಸಿಎಲ್ ವಿಭಾಗೀಯ ಅಧಿಕಾರಿ ಆರ್.ಮಂಜುನಾಥ್ ತಿಳಿಸಿದ್ದಾರೆ.

ಈಗಾಗಲೇ ಕಾಮಗಾರಿ ಆರಂಭಗೊಂಡಿದ್ದು, ಮಳೆಗಾಲ ಆರಂಭಗೊಳ್ಳುವ ಮೊದಲು ನದಿಯಲ್ಲಿ ಆಧಾರಸ್ಥಂಭಗಳಿಗೆ ಪಂಚಾಂಗ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ಮಳೆಗಾಲ ಮುಗಿಯುತ್ತಿದ್ದಂತೆಯೇ ಒಂದೇ ವರ್ಷದೊಳಗೆ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರ ದತ್ತ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
-ಮೋಹನ್ ಕೆ.ಶ್ರೀಯಾನ್ ರಾಯಿ

By suddi9

Leave a Reply

Your email address will not be published. Required fields are marked *